ಬೆಂಗಳೂರು: ಗುರುವಾರದ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ. ಉಪಚುನಾವಣೆ ನಡೆಯೋ 15 ಕ್ಷೇತ್ರಗಳಲ್ಲಿ ರಜೆ ಘೋಷಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 15 ಕ್ಷೇತ್ರಗಳ ಮತದಾರರು, ಭದ್ರತಾ ಸಿಬ್ಬಂದಿ, ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ.
15 ಕ್ಷೇತ್ರದ ಅಂಕಿಅಂಶಗಳು:
ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲಿ ಒಟ್ಟು 165 ಮಂದಿ ಸ್ಪರ್ಧೆಯಲ್ಲಿದ್ದಾರೆ. ಇದರಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿಯೇ 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 15 ಕ್ಷೇತ್ರಗಳಲ್ಲಿ ಒಟ್ಟು 37,82,681 ಮತದಾರರು ಇದ್ದಾರೆ. ಅದರಲ್ಲಿ 18,52,027 ಪುರುಷ ಮತದಾರರು, 19,25,529 ಮಹಿಳಾ ಮತದಾರರು ಇದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 4,185 ಮತಗಟ್ಟೆಗಳಿವೆ. ಸುಮಾರು 42,509 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ 11,241 ಪೊಲೀಸರು, 2,511 ಸಿಆರ್ಪಿಎಫ್ ಸಿಬ್ಬಂದಿ, 900 ಸೂಕ್ಷ್ಮ ವೀಕ್ಷಕರ ನಿಯೋಜನೆ ಮಾಡಲಾಗಿದೆ.
ಜಪ್ತಿಯಾದ ವಸ್ತು, ನಗದು ಎಷ್ಟು?
ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 10.70 ಕೋಟಿ ರೂ. ಮೌಲ್ಯದ ಅಕ್ರಮ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರೊಂದಿಗೆ 4.16 ಕೋಟಿ ರೂ. ನಗದು, 4.58 ಕೋಟಿ ಮೌಲ್ಯದ ಮದ್ಯ, 1.96 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹಾಗೆಯೇ ಸುಮಾರು 4,950 ರೂ. ಮೌಲ್ಯದ ಡ್ರಗ್ಸ್ ಕೂಡ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂಬಂಧ 197 ನೀತಿ ಸಂಹಿತೆ ಎಫ್ಐಆರ್ ದಾಖಲಿಸಲಾಗಿದೆ.
ಕೆ.ಆರ್ ಪೇಟೆ, ರಾಣೇಬೆನ್ನೂರು, ಹಿರೇಕೆರೂರು, ಗೋಕಾಕ್, ವಿಜಯನಗರ, ಚಿಕ್ಕಬಳ್ಳಾಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ.ಆರ್ ಪುರಂ, ಹುಣಸೂರು, ಕಾಗವಾಡ, ಅಥಣಿ, ಯಲ್ಲಾಪುರ, ಹೊಸಕೋಟೆಯಲ್ಲಿ ಗುರುವಾರ ಈ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಡಿ. 9ಕ್ಕೆ ಫಲಿತಾಂಶ ಹೊರಬೀಳಲಿದೆ.