ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಿಂದ ಜನರ ತಲೆ ಬೋಳಿಸುವ ಕಾರ್ಯಕ್ಕೆ ಕೈ ಹಾಕಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶನಿವಾರ ಕಾಂಗ್ರೆಸ್ ಶಾಸಕ ಹರಿಪ್ರಸಾದ್ ಅವರು, ಈ ಗ್ಯಾರಂಟಿಗಳು ಸಾಕು, ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದಿದ್ದಾರೆ. ಇದೀಗ ಸರ್ಕಾರ ಮೆಟ್ರೋ ದರ ಏರಿಸಿದೆ. ಹಾಲಿನ ದರ ಏರಿಕೆ, ಸ್ಟಾಂಪ್ ಡ್ಯೂಟಿ ಹೆಚ್ಚಳ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ದವಸ ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಇಷ್ಟೆಲ್ಲ ಆದರೂ ಯಾವುದಕ್ಕೆ ದರ ಏರಿಸಬೇಕು ಎಂಬುದರಲ್ಲಿ ಸರ್ಕಾರ ಬ್ಯೂಸಿಯಾಗಿದೆ. ಈ ಸರ್ಕಾರ ಎಲ್ಲ ವಿಚಾರದಲ್ಲೂ ಕೈಚೆಲ್ಲಿ ಕುಳಿತಿದೆ. ಇವರಿಗೆ ಗ್ಯಾರಂಟಿ ಯಾವುದೇ ಕಾರಣಕ್ಕೂ ಅದನ್ನು ರದ್ದು ಮಾಡುವುದಿಲ್ಲ ಎಂಬ ವಾದ ಒಂದೆಡೆ, ಇನ್ನೊಂದೆಡೆ ಬೆಲೆ ಏರಿಕೆ ಮೂಲಕ ಜನರ ತಲೆ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.ಇದನ್ನೂ ಓದಿ: ಕೆಲಸದ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆ – ಚಾಕುವಿನಿಂದ ಇರಿದು ಓರ್ವನ ಹತ್ಯೆ
ಇದೇ ವೇಳೆ ರಾಜ್ಯಪಾಲರು ಕ್ಷುಲ್ಲಕ ಕಾರಣಕ್ಕಾಗಿ ಸುಗ್ರೀವಾಜ್ಞೆಯನ್ನು ವಾಪಸ್ ಕಳಿಸಿದ್ದಾರೆ ಎಂಬ ಉಗ್ರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಲ್ಲಿ ಪೀಪಲ್ ಸ್ಟಾರ್ಟ್ ಸಿಲ್ಲಿ ಥಿಂಗ್ಸ್ ಓನ್ಲಿ ಎಂದರಲ್ಲದೆ, ಈ ಸರ್ಕಾರ ಬಂದಾಗಲೇ ಹೆಚ್ಚು ಕಡಿಮೆ ಸ್ಮಶಾನ ಸೇರುವ ಪರಿಸ್ಥಿತಿ ಬಂದಿದೆ. ಈ ಸರ್ಕಾರದ ಕೆಟ್ಟ ಹೆಸರು ಶೇ.99ಕ್ಕೆ ಹೋಗಿದೆ ಎಂದರು.
ಮಾನ್ಯ ರಾಜ್ಯಪಾಲರಿಗೆ, ಈ ಫೈನಾನ್ಸ್ ವಿಚಾರದಲ್ಲಿ ಅಥವಾ ಮೈಕ್ರೋ ಫೈನಾನ್ಸ್ ಮಾಡುವವರಿಗೂ ಇವರಿಗೂ ಏನು ಸಂಬಂಧ ಇರುತ್ತದೆ. ಬಹಳ ಕಾಲದಿಂದ ನಾವು ಕ್ರಮಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ಇವತ್ತಿನವರೆಗೆ ಕ್ರಮ ಜರುಗಿಸಲು ಈ ಸರ್ಕಾರಕ್ಕೆ ಆಗಿಲ್ಲ. ಈಗ 10 ವರ್ಷಗಳ ಶಿಕ್ಷೆಯನ್ನು ಅದರಲ್ಲಿ ನಮೂದಿಸಿ ಕಳಿಸಿದ್ದಾರೆ. ಇಂತಹ ತೀರ್ಮಾನ ತೆಗೆದುಕೊಳ್ಳಲು ಅದು ಸದನದಲ್ಲಿ ಚರ್ಚೆ ಆಗಬೇಕಿತ್ತು. ಸದನದಲ್ಲಿ ಏನೂ ಚರ್ಚೆ ಆಗದೇ ನೀವು ಇಷ್ಟಾನುಸಾರ ಮಾಡುವುದು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಕೂಡ. ಆದ್ದರಿಂದಲೇ ಅವರು ವಾಪಸ್ ಕಳಿಸಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ನಾಳೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು ರಾಜ್ಯಪಾಲರಿಗೆ ಮರು ರವಾನೆ