ಧಾರವಾಡ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ರೈತರ ಜೊತೆ ನಾವಿದ್ದೇವೆ ಎಂದು ಹೇಳುತ್ತಿದೆ. ಆದರೆ ರೈತರು ಸಂಕಷ್ಟದಲ್ಲಿ ಇದ್ದಾಗ ಸರ್ಕಾರದ ನಾಯಕರು ರೆಸಾರ್ಟಿನಲ್ಲಿ ಮಾಲೀಸ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಕುಂದಗೋಳ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಮಾನ ಮರ್ಯಾದೆ ಇಲ್ಲದ ಸರ್ಕಾರ. ಪಂಚೇಂದ್ರಿಯಗಳೇ ಇಲ್ಲದ ಸರ್ಕಾರ. ಇವರು ಯಾವ ರೈತರ ಸಾಲಮನ್ನಾ ಮಾಡಿಲ್ಲ. ಬರಗಾಲ ಸಮಸ್ಯೆಯನ್ನು ನಿಭಾಯಿಸುತ್ತಿಲ್ಲ. ರೈತರ ಜೊತೆ ಇದ್ದೇವೆ ಅಂತಾರೆ, ಋಣ ಮುಕ್ತ ಪತ್ರದ ಬದಲಿಗೆ ಸಾಂತ್ವನ ಪತ್ರ ಕೊಡುತ್ತಾರೆ. ರೈತರು ಸಂಕಷ್ಟದಲ್ಲಿ ಇದ್ದಾಗ ರೆಸಾರ್ಟ್ ನಲ್ಲಿ ಮಾಲೀಸ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ ಎಂದು ಟಾಂಗ್ ಕೊಟ್ಟರು.
ಸಿ. ಎಂ ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿರುವುದಕ್ಕೆ ಪ್ರತಿಕ್ರಿಯಿಸಿ, ಮೋದಿ ಬಗ್ಗೆ ಜೋಕರ್ ಮತ್ತು ಬ್ರೋಕರ್ ಇಬ್ರಾಹಿಂ ಏನೇನೋ ಮಾತನಾಡುತ್ತಾ ಇದ್ದಾರೆ. ಭ್ರಷ್ಟಾಚಾರದ ಹಣ ತಂದು ಕುಂದಗೋಳ ಚಿಂಚೊಳಿಯಲ್ಲಿ ಹಂಚುತ್ತಿದ್ದಾರೆ ಎಂದು ಕಿಡಿಕಾರಿದರು.
ಈಗಾಗಲೇ ಹರ್ಲಾಪುರದ ರೈತ ಈಶ್ವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಿಂದ ಸಿಎಂಗೆ ಕುಂದಗೋಳಗೆ ಸ್ವಾಗತ ಮಾಡುವಂತಾಗಿದೆ. ಈ ಸರ್ಕಾರ ನಿಜವಾಗಿಯೂ ಬದುಕಿದ್ದರೆ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.