ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ನಮಗೆ ರಿಸ್ಕ್. ಹಾಗಾಗಿ ನಾವು ಕೈ ಹಾಕಲ್ಲ. ಒಂದು ವೇಳೆ ನೀವು ಆದೇಶ ನೀಡಿದರೆ ಮಾತ್ರ ಆಪರೇಷನ್ ಕಮಲಕ್ಕೆ ಕೈ ಹಾಕುತ್ತೇವೆ ಎಂದು ರಾಜ್ಯ ಬಿಜೆಪಿ, ಹೈಕಮಾಂಡ್ ಗೆ ವರದಿಯನ್ನು ನೀಡಿದೆ ಎಂದು ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಶನಿವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವರದಿ ನೀಡಲಾಗಿದೆಯಂತೆ. ರಾಜ್ಯದಲ್ಲಿ ಮೂರು ತಿಂಗಳು ನಾವು ಸೈಲೆಂಟ್ ಆಗಿರಬೇಕು. ಸದ್ಯ ನಮಗೆ ಹದವಾದ ಪರಿಸ್ಥಿತಿ ಇದೆ. ಈ ಬಾರಿ ನಾನು ಉತ್ತರ ಕರ್ನಾಟಕದಲ್ಲಿಯೇ ಹೆಚ್ಚು ಪ್ರವಾಸ ಕೈಗೊಳ್ಳುತ್ತೇನೆ. ಲೋಕಸಭೆ ಚುನಾವಣಾ ತಯಾರಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವರದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಸಮ್ಮಿಶ್ರ ಸರ್ಕಾರದ ಅಸಮಾಧಾನಗಳ ಅವಕಾಶವನ್ನು ಬಳಸಿಕೊಳ್ಳುವ ಬಗ್ಗೆ ನೀವೇ ನಿರ್ಧಾರ ತೆಗೆದುಕೊಳ್ಳಿ. ರಾಜ್ಯ ಘಟಕಕ್ಕೆ ಆಪರೇಷನ್ ಕಮಲ ರಿಸ್ಕ್, ಹಾಗಾಗಿ ನೀವು ಆ ಟಾಸ್ಕ್ ವಹಿಸಿಕೊಳ್ಳಿ. ಅದು ಮೂರು ತಿಂಗಳ ಬಳಿಕ ಆಪರೇಷನ್ ಟಾಸ್ಕ್ ಗೆ ಕೈ ಹಾಕಬೇಕೋ, ಬೇಡವೋ ಅನ್ನೋದನ್ನ ನೀವೇ ನಿರ್ಧರಿಸಿ. ಸದ್ಯಕ್ಕೆ ರಾಜ್ಯ ನಾಯಕರು ಎಲ್ಲವನ್ನು ಗಮನಿಸುವುದರ ಜೊತೆಗೆ ಕುಮಾರಸ್ವಾಮಿ ವಿವಾದಿತ ಹೇಳಿಕೆಗಳ ಲಾಭ ಪಡೆಯಲು ನಾವು ಸುಮ್ಮನೆ ಕೂರಲ್ಲ ಎಂಬ ಸಂಪೂರ್ಣ ವರದಿಯನ್ನು ರಾಜ್ಯ ಬಿಜೆಪಿ ಘಟಕ ಹೈಕಮಾಂಡ್ ಗೆ ರವಾನಿಸಿದೆ ಎನ್ನಲಾಗಿದೆ.
ಆಗಸ್ಟ್ 9 ಕ್ರಾಂತಿ ದಿನ, ಅವತ್ತೇ ನಮ್ಮ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ರಾಜ್ಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಒಟ್ಟು 3 ತಂಡಗಳು ರಚನೆಯಾಗಿವೆ. ಒಂದನೇ ತಂಡದ ನೇತೃತ್ವವನ್ನು ನಾನು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ ವಹಿಸಿಲಿದ್ದೇವೆ. ನಾವು ಉತ್ತರ ಕರ್ನಾಟಕದ 13 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದೇವೆ. ಉಳಿದಂತೆ ಎರಡನೇ ತಂಡದಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್, ಅರವಿಂದ ಲಿಂಬಾವಳಿ ಹಾಗೂ ಕೊನೆಯ ತಂಡದ ನೇತೃತ್ವವನ್ನು ಈಶ್ವರಪ್ಪ, ಸಿ.ಟಿ.ರವಿ, ಲಕ್ಷ್ಮಣ ಸವದಿ ಅವರು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.