ಕರ್ನಾಟಕದಲ್ಲಿ ಕನ್ನಡಿಗರೇ ನಿಜವಾದ ಸ್ಟಾರ್ಗಳೆಂಬುದು ವಾಸ್ತವ. ಕನ್ನಡಕ್ಕೆ ಕುತ್ತುಂಟಾದರೆ ಕನ್ನಡಿಗರೆಲ್ಲರೂ ಒಗ್ಗಟಾಗಿ ನಿಂತು ಹೋರಾಡುತ್ತಾರೆಂಬುದೂ ನಿರ್ವಿವಾದ. ಅಂಥಾ ಅಪ್ಪಟ ಕನ್ನಡತನದೊಂದಿಗೆ, ಸಹಜ ಸುಂದರವಾದ ದೇಸೀ ಕಥೆಯೊಂದಿಗೆ ಮೂಡಿ ಬಂದಿರುವ ಚಿತ್ರ ಸ್ಟಾರ್ ಕನ್ನಡಿಗ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರವನ್ನು ಆಟೋ ಡ್ರೈವರ್ಗಳು, ಶ್ರಮ ಜೀವಿಗಳೆಲ್ಲ ಕಾಸು ಹೊಂದಿಸಿ ನಿರ್ಮಾಣ ಮಾಡಿದ್ದಾರೆ. ಇಂಥಾ ಕಲಾ ಪ್ರೇಮವಿದ್ದಲ್ಲಿ ಒಂದೊಳ್ಳೆ ಚಿತ್ರ ರೂಪುಗೊಂಡಿರುತ್ತದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ತಕ್ಕುದಾಗಿಯೇ ಮೈ ಕೈ ತುಂಬಿಕೊಂಡಿರುವ ಸ್ಟಾರ್ ಕನ್ನಡಿಗ ಇದೇ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲು ತಯಾರಾಗಿದ್ದಾನೆ.
ಇದು ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಚಿತ್ರ. ಶಾಲಿನಿ ಭಟ್ ಇಲ್ಲಿ ನಾಯಕಿಯಾಗಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಆಟೋ ಡ್ರೈವರ್ಗಳೇ ಬೆವರಿನ ಹಣದಿಂದ ನಿರ್ಮಾಣ ಮಾಡಿರುವ ಈ ಚಿತ್ರ ಹೆಸರಿಗೆ ತಕ್ಕುದಾಗಿಯೇ ಕನ್ನಡಾಭಿಮಾನದ ಕಥೆ ಹೊಂದಿರೋ ಚಿತ್ರ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಇದು ಕನ್ನಡ ಪರವಾದ ಹೋರಾಟವನ್ನು ಮಾತ್ರವೇ ಆಧಾರವಾಗಿಸಿಕೊಂಡಿರುವ ಚಿತ್ರವಲ್ಲ. ಇಲ್ಲಿ ಬದುಕನ್ನೇ ಹೋರಾಟವೆಂದುಕೊಂಡ ಜೀವಗಳ ಮನ ಮಿಡಿಯುವ ಕಥೆಯಿದೆ. ಅದು ಪ್ರತಿಯೊಬ್ಬರನ್ನೂ ಮುಟ್ಟುವಂತೆ ಮೂಡಿ ಬಂದಿದೆ.
ಇಲ್ಲಿ ವೈಭವೀಕರಣಕ್ಕೆ ಆಸ್ಪದ ಕೊಟ್ಟಿಲ್ಲ. ಅದನ್ನೆಲ್ಲ ಇಲ್ಲಿರೋ ಸಹಜ ಸುಂದರ ಕಥೆಯೇ ಮಾಡುತ್ತದೆ. ಚಿತ್ರತಂಡವೇ ಹೇಳಿಕೊಳ್ಳುವ ಪ್ರಕಾರ ಈ ಕಥೆಯನ್ನು ಅತ್ಯಂತ ಸಹಜವಾಗಿ ಅಣಿಗೊಳಿಸಲಾಗಿದೆ. ನೋಡುಗರಿಗೆ ಕಣ್ಣಮುಂದೊಂದು ಕಥೆ ನಡೆಯುತ್ತದೆ ಅನ್ನಿಸೋದಕ್ಕಿಂತ ತಮ್ಮ ನಡುವಿನದ್ದೇ ಕಥೆಗಳು ತೆರೆ ಮೇಲೆ ಸುರುಳಿ ಬಿಚ್ಚಿಕೊಳ್ಳುತ್ತಿದೆ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆಯಂತೆ. ಇದೆಲ್ಲದರಾಚೆಗೂ ಹೆಸರಿಗೆ ತಕ್ಕುದಾದ ಗುಣ ಲಕ್ಷಣಗಳು ಈ ಸಿನಿಮಾದಲ್ಲಿವೆ. ಕನ್ನ ಪ್ರೀತಿಯ ಸ್ಟಾರ್ ಕನ್ನಡಿಗ ಚಿತ್ರ ಕನ್ನಡ ರಾಜ್ಯೋತ್ಸವದಂದೇ ಬಿಡುಗಡೆಗೊಳ್ಳುತ್ತಿರೋದು ನಿಜಕ್ಕೂ ಕನ್ನಡದ ಪ್ರೇಕ್ಷಕರ ಪಾಲಿಗೆ ಹಬ್ಬದಂಥಾ ಸಂಗತಿ.