ಶಿವಮೊಗ್ಗ: ಪೌರತ್ವ ಕಾಯ್ದೆ ಅನುಷ್ಠಾನಗೊಳಿಸಿರುವ ಕೇಂದ್ರ ಸರ್ಕಾರಕ್ಕೆ ಇಂದು ರಂಗಕರ್ಮಿಗಳು ಮತ್ತು ಸಾಹಿತಿಗಳು ಹಾಗೂ ಪರಿಸರವಾದಿಗಳು ವಿಭಿನ್ನವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ವೇಷಭೂಷಣ, ಪೋಷಾಕು ಧರಿಸಿ ರಂಗಕರ್ಮಿಗಳು ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಪೌರತ್ವ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ಧಾರ್ಮಿಕ ಅಲ್ಪಸಂಖ್ಯಾತರ ಹಿತವನ್ನು ಕಾಪಾಡಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಲ್ಲದೇ ಪೌರತ್ವ ಕಾಯ್ದೆ ಪರವಾಗಿ ಘೋಷಣೆಗಳನ್ನು ಕೂಗಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪತ್ರ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಪೌರತ್ವ ತಿದ್ದುಪಡಿ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಮಾಡಿ, ಅಲ್ಪಸಂಖ್ಯಾತರ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಈ ಕಾಯ್ದೆಯನ್ನು ಸದನದಲ್ಲಿ ಅಂಗೀಕಾರ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ರಂಗಕರ್ಮಿಗಳು ಹಾಗೂ ಸಾಹಿತಿಗಳು ತಿಳಿಸಿದರು.
ಈ ಕಾಯ್ದೆ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡುವಂತಹ ಕಾರ್ಯವಾಗಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯದ ಪರವಾಗಿ ನಮ್ಮ ಒಕ್ಕೂಟ ಬೆಂಬಲವಾಗಿ ನಿಂತಿದೆ. ಇಂತಹ ಮಹತ್ಕಾರ್ಯವನ್ನು ಮಾಡಿರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕಾರ್ಯ ಮೆಚ್ಚುವಂತದ್ದು ಎಂದು ರಂಗಕರ್ಮಿಗಳು ಜಿಲ್ಲಾಧಿಕಾರಿಗಳ ಮೂಲಕ ಮೋದಿಯವರಿಗೆ ಅಭಿನಂದನಾ ಪತ್ರ ರವಾನಿಸಿದರು.