ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಸ್ಟಿ ಸೋಮಶೇಖರ್ ಅವರು ಕಾಂಗ್ರೆಸ್ ನಾಯಕರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ 13 ತಿಂಗಳ ಅವಧಿಯಲ್ಲಿ ನಾವು ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಆಗುತ್ತಿದ್ದ ಲೋಪದೋಷಗಳ ಕುರಿತು ಹಾಗೂ ತಮ್ಮ ಅಸಮಾಧಾನದ ಕುರಿತು ಪಕ್ಷದ ನಾಯಕರ ಬಳಿ ಹೇಳಿಕೊಂಡಿದ್ದೇವು. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಸೇರಿದಂತೆ ಸಿಎಂ ಕುಮಾರಸ್ವಾಮಿ ಅವರು ತಂಗಿದ್ದ ಹೋಟೆಲ್ಗೂ ಭೇಟಿ ನೀಡಿ ಮನವಿ ಮಾಡಿದ್ದೇವು. ಆದರೆ ಆ ಸಂದರ್ಭದಲ್ಲಿ ಅಶ್ವಾಸನೆ ನೀಡುತ್ತಿದ್ದ ಅವರು ಮತ್ತೆ ನಿರ್ಲಕ್ಷ್ಯ ವಹಿಸುತ್ತಿದ್ದರು ಎಂದು ಆರೋಪಿಸಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಆರು ಗಂಟೆ ಒಳಗೆ ವಿಧಾನಸೌಧಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಆ ಮೂಲಕ ಎಲ್ಲಾ ಶಾಸಕರು ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸುತ್ತೇವೆ. ಮುಂಬೈನಿಂದಲೂ ಅತೃಪ್ತ ಶಾಸಕರು ಸಂಜೆ ಬಂದು ಸ್ಪೀಕರ್ ಬಳಿ ಮಾತನಾಡುತ್ತೇವೆ ಎಂದರು. ಅಲ್ಲದೇ ಬಿಜೆಪಿ ಅವರು ನಮ್ಮನ್ನ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿ ನಾಯಕರು ನಮ್ಮನ್ನು ಆಟ ಆಡಿಸುತ್ತಿಲ್ಲ. ಇದೆಲ್ಲಾ ಸುಳ್ಳು. ನಾವು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿಲ್ಲ, ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ವೈಯಕ್ತಿಕ ಕಾರಣಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದರು.
ಡಿಕೆಶಿಗೆ ಮುಂಬೈಗೆ ಬರೋದು ಬೇಡ ಅಂತ ಹೇಳಿದ್ದೆ. ಆದರೆ ಈ ಹಿಂದೆ ಅವರ ಮನೆಗೆ ಹೋಗಿ ಒಂದು ಗಂಟೆಗಳ ಕಾಲ ನಮ್ಮ ಸಮಸ್ಯೆ ಹೇಳಿ ಕೊಂಡಿದ್ದೇವು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಇಂದು ಕೂಡ ಅವರನ್ನು ಭೇಟಿ ಮಾಡುವುದಿಲ್ಲ. ಈ ಹಿಂದೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ನಾಯಕರು ಪದೇ ಪದೇ ನಿರಾಸೆ ಮಾಡಿದ್ದರು. ಸಮಸ್ಯೆ ಬಗೆಹರಿಸುವುದಿಲ್ಲ ಅಂದರೆ ಪಕ್ಷದಿಂದ ಹಿಂದೆ ಸರಿಯುತ್ತೇವೆ ಎಂದು ಹೇಳಿದ್ದೇವು. ಆದರಂತೆ ಈಗ ನಾವು ನಮ್ಮ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಮೈತ್ರಿ ಸರ್ಕಾರದ ಕೆಲ ಒಡಂಬಡಿಕೆಗಳು ನಮಗೆ ಇಷ್ಟವಾಗಿರಲಿಲ್ಲ. ಅಧಿಕಾರಿಗಳ ಮೂಲಕ ಕೆಲಸ ಮಾಡಿಸಿಕೊಳ್ಳುವುದಾದರೆ ಶಾಸಕರಾಗಿ ನಾವು ಯಾಕೆ ಇರಬೇಕು? ಈಗ ಬಂದು ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಕಾಲ ಮೀರಿ ಹೋಗಿದೆ ಎಂದರು. ಸ್ಪೀಕರ್ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲೂ ಯಾರನ್ನು ಮಾತನಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.