ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಎಗ್ಗಿಲ್ಲದೆ ಸಾಮೂಹಿಕ ನಕಲು ನಡೆದಿದೆ. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹಾಳೆಯಲ್ಲಿ ಪ್ರಶ್ನೆಗಳನ್ನು ಬರೆದು ವಿದ್ಯಾರ್ಥಿಗಳು ಹೊರಗೆ ಎಸೆದಿದ್ದಾರೆ. ಹೊರಗಡೆ ನಿಂತವರು ಉತ್ತರಗಳ ಚೀಟಿಗಳನ್ನ ಕಿಟಕಿ ಮೂಲಕ ನೀಡಿದ್ದು ಸಾಮೂಹಿಕ ನಕಲು ಭರ್ಜರಿಯಾಗಿ ನಡೆದಿದೆ.
ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಎದುರಲ್ಲೇ ಸಾಮೂಹಿಕ ನಕಲು ನಡೆದರು ತಡೆಯಲು ಸಾಧ್ಯವಾಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಯಾವುದೇ ಭದ್ರತೆಯಿಲ್ಲದಿರುವುದೇ ಸಾಮೂಹಿಕ ನಕಲು ನಡೆಯಲು ಕಾರಣವಾಗಿದೆ.
ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಮಾಧ್ಯಮಗಳ ಪ್ರವೇಶ ನಿಷೇಧಿಸಲಾಗಿದ್ದು, ಸಾಮೂಹಿಕ ನಕಲಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. ಕನ್ನಡ ವಿಷಯದ ಪರೀಕ್ಷೆಗೇ ಸಾಮೂಹಿಕ ನಕಲು ನಡೆದಿದ್ದು ಇನ್ನೂ ಗಣಿತ ಹಾಗೂ ವಿಜ್ಞಾನ ವಿಷಯದ ಪರೀಕ್ಷೆ ವೇಳೆ ಹೆಚ್ಚಿನ ಪ್ರಮಾಣದ ಪರೀಕ್ಷಾ ಅಕ್ರಮ ನಡೆಯುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿ ವರದಿ ಬಳಿಕ ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 26,066ವಿದ್ಯಾರ್ಥಿಗಳಲ್ಲಿ 25,144 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 922 ವಿದ್ಯಾರ್ಥಿಗಳು ಗೈರಾಗಿದ್ದಾರೆ.