ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ನಟಿ ಶೃತಿಗೆ ನಿಂದನೆ ಮಾಡುವವರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ.
ಶೃತಿ ಮತ್ತು ಅರ್ಜುನ್ ಸರ್ಜಾ ಪ್ರಕರಣ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಾಗುತ್ತಿದ್ದು, ಪ್ರಕರಣ ಬಳಿಕ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ನಕಲಿ ಅಕೌಂಟ್ ತೆರೆದು ಶೃತಿಗೆ ನಿಂದನೆ ಮಾಡಲಾಗುತ್ತಿದೆ. ಅಲ್ಲದೇ ಅಶ್ಲೀಲ ಪದಗಳನ್ನು ಬಳಸಿ ತೇಜೋವಧೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಂದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಗೆ ಇಂದು ದೂರು ನೀಡಲಾಗುತ್ತದೆ. ನಟಿ ಶೃತಿ ಹರಿಹರನ್ ಪರವಾಗಿ ದೂರು ನೀಡಲು ಅವರ ಮ್ಯಾನೇಜರ್ ತೀರ್ಮಾನಿಸಿದ್ದಾರೆ.
ಈ ಸಂಬಂಧ ಶೃತಿ ಆಪ್ತ ಹರೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಬಗ್ಗೆ ನಾವು ಕೇಸ್ ದಾಖಲಿಸಿದ ಬಳಿಕವೂ ಕೆಲವರು ಸಾಮಾಜಿಕ ಜಾಲತಾಣವನ್ನು ತೀರಾ ಅತಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಶೃತಿ ಅವರ ಪರ್ಸನಲ್ ಫೋನ್ ನಂಬರಿಗೂ ಅಸಹ್ಯಕರವಾದ ಮೆಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಯಾರು ಶೃತಿ ಅವರ ವಿರುದ್ಧ ವೈಯಕ್ತಿಕವಾಗಿ ನಿಂದನೆಗಿಳಿದಿದ್ದಾರೆ ಅವರ ವಿರುದ್ಧ ದೂರು ದಾಖಲಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ಹಾಗೆಯೇ ಶೃತಿ ಅವರ ಮ್ಯಾನೇಜರ್ ಮುಖಾಂತರ ಇಂದು ಈ ಕಂಪ್ಲೇಂಟ್ ದಾಖಲಿಸುತ್ತೇವೆ ಅಂದ್ರು.
ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ನಟರೂ ಕಾನೂನಾತ್ಮಕವಾಗಿಯೇ ಎದುರಿಸುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಒಂದು ಹೆಣ್ಣು ಮಗಳನ್ನು ಹೀನಾಯವಾಗಿ ನಿಂದಿಸುವುದು ಸರಿಯಿಲ್ಲ. ಅವರ ಅಭಿಪ್ರಾಯವನ್ನು ಆರೋಗ್ಯಕರವಾಗಿ ಚರ್ಚೆ ಮಾಡಲಿ. ಅದನ್ನು ನಾವು ಬೇಡ ಅನ್ನಲ್ಲ. ಆದ್ರೆ ಅದು ಆರೋಗ್ಯಕರವಾಗಿರಲಿ. ಸೊಂಟದ ಕೆಳಗಿನ ಭಾಷೆಗಳನ್ನು ಬಳಸುವ ಮೂಲಕ ಓರ್ವ ನಟಿಯಾಗಿರುವ ಶೃತಿಗೆ ಘಾಸಿಯಾಗುತ್ತದೆ. ಯಾಕಂದ್ರೆ ಅವರ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಅನ್ನೋದನ್ನು ಮೊದಲು ಅವರು ತಿಳಿದುಕೊಳ್ಳಬೇಕು. ಇದನ್ನು ನೋಡಿಕೊಂಡು ಇಂತಹ ಕೆಲಸಗಳನ್ನು ನಿಲ್ಲಿಸಬೇಕು ಅಂತ ಅವರು ಕೇಳಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=EejCJP69I5U