ಬೆಂಗಳೂರು: 2018 ಹಾಗೂ 2019 ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿರುವ ಸೃಜನಾ.ಡಿಗೆ ಸನ್ಮಾನ ಮಾಡಲಾಯಿತು.
ಗುರುವಾರ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಶಿಕ್ಷಣಾಡಳಿತ ವತಿಯಿಂದ ಆನೇಕಲ್ ಬಿಇಓ ಕಚೇರಿಯಲ್ಲಿ ಈ ಸನ್ಮಾನ ಮಾಡಲಾಯಿರು. ತಾಲೂಕು ಶಿಕ್ಷಣಾಧಿಕಾರಿ ರಮೇಶ್, ತಾಲೂಕು ದಂಡಾಧಿಕಾರಿ ಮಹದೇವಯ್ಯ ಹಾಗು ತಾಲೂಕು ಪಂಚಾಯತ್ ಇಓ ಅವರ ನೇತೃತ್ವದಲ್ಲಿ ಸೃಜನಾ ಹಾಗು ಅವರ ಕುಟುಂಬಕ್ಕೆ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ ಭಾಗಿಯಾಗಿ ಆನೇಕಲ್ ತಾಲೂಕಿಗೆ ತನ್ನ ಪರಿಶ್ರಮದಿಂದ ದೊಡ್ಡ ಹೆಸರು ತಂದು ಕೊಟ್ಟ ಸೃಜನಾಗೆ ಸಿಹಿ ತಿನ್ನಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ತಾಲೂಕು ಶಿಕ್ಷಣಾಧಿಕಾರಿ ರಮೇಶ್, ಸೃಜನಾಳ ಈ ಸಾಧನೆ ಆಕೆಯ ಪರಿಶ್ರಮ ತಂದೆ-ತಾಯಿಯ ಪ್ರೋತ್ಸಾಹ ಹಾಗೂ ಶಾಲೆಯ ಶಿಕ್ಷಕರ ಒಂದು ದೊಡ್ಡ ಮಾರ್ಗದರ್ಶನ ಈ ಅತ್ಯುನ್ನತ ಸಾಧನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆಕೆಯ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಜವಾಬ್ದಾರಿ ಇದೆ. ಆಕೆ ಡಾಕ್ಟರ್ ಆಗುವಂತಹ ಕನಸು ಹೊಂದಿದ್ದು, ಅವಳ ಕನಸು ನೆರವೇರಲಿ ಆಶೀರ್ವದಿಸಿದರು.