ಮಂಡ್ಯ: ರಸ್ತೆ ಬದಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವು ಕೊಟ್ಟ ಮಾತಿನಂತೆ ಬಾಲಕಿಯ ಮನೆಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರನ್ನು ಕಳುಹಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಾಲಕಿಗೆ ಕೊಟ್ಟ ಮಾತಿನಂತೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ಹೂ ಮಾರುತ್ತಿದ್ದ ಬಾಲಕಿಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಾಲಕಿ ಶಬಾಬ್ತಾಜ್ ಮನೆಗೆ ತಹಶೀಲ್ದಾರ್ ನಾಗೇಶ್ ಅವರು ಭೇಟಿ ನೀಡಿದ್ದು, ಬಾಲಕಿ ಮತ್ತು ಅವರ ಮನೆಯವರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಈ ವೇಳೆ ಬಾಲಕಿ ಶಬಾಬ್ತಾಜ್ ಮನೆಯವರ ಕಷ್ಟವನ್ನು ತಹಶೀಲ್ದಾರ್ ಬಳಿ ಹೇಳಿಕೊಂಡಿದ್ದಾಳೆ. ತಾನು ಉನ್ನತ ವ್ಯಾಸಂಗ ಮಾಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಸದ್ಯದಲ್ಲೇ ತಾವು ಪಡೆದಿರುವ ಮಾಹಿತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಳುಹಿಸಿಕೊಡುವುದಾಗಿ ತಹಶೀಲ್ದಾರ್ ನಾಗೇಶ್ ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಾಮಾನ್ಯ ಬಾಲಕಿಯೊಬ್ಬಳ ಕಷ್ಟಕ್ಕೆ ಸ್ಪಂದಿಸಿದ ರೀತಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಬುಧವಾರ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೂಳ ಗ್ರಾಮದ ರಸ್ತೆ ಬದಿಯಲ್ಲಿ 12 ವರ್ಷದ ಶಬಾಬ್ತಾಜ್ ಬಾಲಕಿ ಶಾಲೆಗೆ ಹೋಗದೆ ಹೂವನ್ನು ಮಾರುತ್ತಿದ್ದಳು. ಅದೇ ಮಾರ್ಗವಾಗಿ ಬರುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಲಕಿಯ ಬಳಿ ಕಾರ್ ನಿಲ್ಲಿಸಿ ಆಕೆ ಶಾಲೆಗೆ ಹೋಗದೆ ಯಾಕೆ ಹೂ ಮಾರುತ್ತಿದ್ದಾಳೆ ಎಂಬುದನ್ನು ವಿಚಾರಿಸಿದ್ದರು. ಅಷ್ಟೇ ಅಲ್ಲದೇ ಬಾಲಕಿಯ ಬಳಿ ಹೂ ತೆಗೆದುಕೊಂಡು ಬಾಲಕಿ ಬೇಡವೆಂದರೂ ಆಕೆಗೆ ನೂರು ರೂಪಾಯಿ ಕೊಟ್ಟು ಆಕೆಯ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv