ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿಯ ಅದ್ಧೂರಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆಯುತ್ತಿದೆ. ಶ್ರೀರಾಮುಲು ಪುತ್ರಿ ಕುಮಾರಿ ರಕ್ಷಿತಾ ವಿವಾಹ ನಿಶ್ಚಿತಾರ್ಥ ಹೈದರಾಬಾದ್ ಉದ್ಯಮಿ ರವಿಕುಮಾರ್ ಪುತ್ರ ಲಲಿತ್ ಕುಮಾರ್ ಅವರ ಜೊತೆ ನೆರವೇರಿದೆ.
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ವಿವಾಹ ನಿಶ್ಚಿತಾರ್ಥ ನಡೆಯುತ್ತಿದೆ. ಶ್ರೀರಾಮುಲು ಕುಟುಂಬಸ್ಥರು ಮತ್ತು ಸಂಬಂಧಿಕರಲ್ಲಿ ಸಂಭ್ರಮ ಮನೆ ಮಾಡಿದ್ದು ಸಂಪ್ರದಾಯ ಬದ್ಧವಾಗಿ ನಿಶ್ಚಿತಾರ್ಥ ನಡೆಯುತ್ತಿದೆ.
ರಕ್ಷಿತಾ ಹಾಗೂ ಲಲಿತ್ ಲಂಡನ್ನಲ್ಲಿ ಎಂಬಿಎ ಓದಿದ್ದಾರೆ. ಅಲ್ಲಿ ಓದುತ್ತಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿ ಸ್ನೇಹ ಬೆಳೆದಿತ್ತು, ಸಮಯ ಕಳೆದಂತೆ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೀತಿಯ ಬಗ್ಗೆ ರಕ್ಷಿತಾ ಹಾಗೂ ಲಲಿತ್ ಮನೆಯವರ ಬಳಿ ಹೇಳಿದಾಗ ಪೋಷಕರು ಅವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡರು. ಹೀಗಾಗಿ ರಕ್ಷಿತಾ, ಲಲಿತ್ ಮದುವೆಯನ್ನು ಕುಟುಂಬಸ್ಥರು ನಿಶ್ಚಯಿಸಿದರು.
ಶ್ರೀರಾಮುಲು ದಂಪತಿಗೆ ಒಟ್ಟು ನಾಲ್ವರು ಮಕ್ಕಳು. ರಕ್ಷಿತಾ, ದೀಕ್ಷಿತಾ, ಅಂಕಿತಾ ಹಾಗೂ ಧನುಷ್ ಅವರ ಮಕ್ಕಳ ಹೆಸರು. ರಕ್ಷಿತಾ ಪ್ರಥಮ ಪುತ್ರಿಯಾಗಿದ್ದು, ಮಗಳ ನಿಶ್ಚಿತಾರ್ಥವನ್ನು ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಶ್ರೀರಾಮುಲು ಅವರು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಲಂಡನ್ನಲ್ಲಿ ಪ್ರೀತಿಯಲ್ಲಿ ಬಿದ್ದ ಜೋಡಿ ಇಂದು ಬೆಂಗಳೂರಿನಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದೆ.
ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಸಚಿವರು, ಬಿಜೆಪಿ ಶಾಸಕರು ಹಾಗೂ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿ ಗಣ್ಯರು ಜೋಡಿಗೆ ಆರ್ಶಿವಾದ ಮಾಡಿ ಶುಭ ಕೋರಿದ್ದಾರೆ.