– ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡುವಂತೆ ಆಗ್ರಹ
– ದಲಿತ ಬಾಲಕಿ ಅತ್ಯಾಚಾರಿಗಳನ್ನು ಬಂಧಿಸಿ
ಗದಗ: ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಭಜನೆ ಮಾಡುವ ಮೂಲಕ ವಿನೂತನವಾಗಿ ಧರಣಿ ಮಾಡಿದ್ದಾರೆ. ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು, ದಲಿತ ವಿದ್ಯಾರ್ಥಿನಿ ರೇಣುಕಾ ಮಾದರ ಅತ್ಯಾಚಾರಿಗಳನ್ನ ಆದಷ್ಟು ಬೇಗ ಬಂಧಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂತ ಕಾರ್ಯಕರ್ತರಿಗೆ ದತ್ತ ಮಾಲಾಧಾರಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಭಜನೆ ಮಾಡುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪವಿತ್ರ ದತ್ತಪೀಠ ಹಿಂದೂಗಳಿಗೆ ಬಿಟ್ಟುಕೊಡಬೇಕು, ಅಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಅಡೆ-ತಡೆ ಇಲ್ಲದೆ ಹಿಂದೂಗಳಿಗೆ ಪ್ರವೇಶ ನೀಡಬೇಕು ಜೊತೆಗೆ ನಿರಂತರ ಪೂಜಾ ಪುರಸ್ಕಾರ ನಡೆಯಬೇಕು ಎಂದು ಆಗ್ರಹಿಸಿದರು.
ಕಾಮುಕರಿಂದ ಕಗ್ಗೊಲೆಯಾಗಿರುವ ವಿಜಯಪುರದ ದೇವರಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ದಲಿತ ವಿದ್ಯಾರ್ಥಿನಿ ರೇಣುಕಾ ಮಾದರ ಸಾವಿಗೆ ನ್ಯಾಯಾ ಕೊಡಿಸಿ, ಅತ್ಯಾಚಾರ ಮಾಡಿ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಭಜನೆ ಮಾಡುವ ಮೂಲಕವೇ ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ದತ್ತ ಮಾಲಾಧಾರಿಗಳು ಮನವಿ ಸಲ್ಲಿಸಿದರು.