ಮೈಸೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದ್ದು, ಯಾವುದೇ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇಂದು ನಾನು ಮೂಕ ಪ್ರೇಕ್ಷಕನಾಗಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಕೊಟ್ಟ ಅವಕಾಶವನ್ನು ಸರಿಯಾಗಿ ನಿಭಾಯಿಸಲು ಜೆಡಿಎಸ್ ವಿಫಲವಾಗಿದ್ದರೆ, ಇತ್ತ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಸರ್ಕಾರ ನಡೆಸಲು ಕಾಂಗ್ರೆಸ್ ಕೂಡ ವೈಫಲ್ಯ ಅನುಭವಿಸಿದೆ. ಬಿಜೆಪಿ ಕೂಡ ಜನರ ಆದೇಶದಂತೆ ವಿರೋಧಿ ಪಕ್ಷದಲ್ಲಿ ಕುಳಿತು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಇದರಿಂದ ರಾಜ್ಯದ ಜನರು ಬೇಸರಗೊಂಡಿದ್ದು, ನನಗೂ ಅಸಹ್ಯ ಎನಿಸುತ್ತಿದೆ. ಕಳೆದ 7 ತಿಂಗಳಿನಿಂದ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ 40-45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿಲ್ಲ. ದೋಸ್ತಿ ಪಕ್ಷಗಳು ಸಮ್ಮಿಶ್ರ ಸರ್ಕಾರ ಉರುಳುವುದಿಲ್ಲ ಎಂದು ಮಾತ್ರ ಹೇಳಿಕೆ ನೀಡುತ್ತಾರೆ. ಆದರೆ ಅವರಲ್ಲಿ ಎಷ್ಟು ಅಸಮಾಧಾನ ಇದೆ ಎನ್ನುವುದು ಅವರಿಗೆ ತಿಳಿದಿದೆ. ಕರ್ನಾಟಕದ ರಾಜಕಾರಣದ ಬಗ್ಗೆ ಇಡೀ ದೇಶದಲ್ಲೇ ಒಳ್ಳೆಯ ಅಭಿಪ್ರಾಯವಿತ್ತು. ಇಂದು ರಾಜ್ಯದಲ್ಲಿ ಪವರ್ ಪಾಲಿಟಿಕ್ಸ್ ಮಾತ್ರ ನಡೆಯುತ್ತಿದೆ ಎಂದರು.
ಇದೇ ವೇಳೆ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶ್ರೀನಿವಾಸ ಪ್ರಸಾದ್ ಅವರು, ಸಚಿವ ರೇವಣ್ಣ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿ. ಅವರೇ ಹೇಳಿದಂತೆ, ಪಂಚಾಂಗ ನೋಡಿ ಸಮಯ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ಸಮ್ಮಿಶ್ರ ಸರ್ಕಾರ 2 ಕಾರಣಗಳಾಗಿ ಮಾತ್ರ ನಡೆಯುತ್ತಿದ್ದು, ಒಂದು ಕಾಂಗ್ರೆಸ್ ಮುಕ್ತ ಸರ್ಕಾರ ಆಗುತ್ತೆ ಎಂಬ ಭಯ ಹಾಗೂ ಜೆಡಿಎಸ್ ಪಕ್ಷದ ಸಿಎಂ ಸ್ಥಾನದ ಆಸೆ ಅಷ್ಟೇ. ಸರ್ಕಾರ ರಚನೆ ಆದ ಮೊದಲ ದಿನದಿಂದಲೂ ಕೂಡ ಹೊಂದಾಣಿಕೆ ಆಗಿಲ್ಲ ಎಂದು ಹೇಳಿದರು.
ಬಿಜೆಪಿ ಪಕ್ಷದ ಅನುಭವಿ ಮುಖಂಡನಾಗಿ ನಾನು ಪಕ್ಷದ ಹೈಕಮಾಂಡ್ಗೆ ಸಲಹೆ ನೀಡಿದ್ದೇನೆ. ಅವುಗಳನ್ನು ಸ್ವೀಕರಿಸುವುದು ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಲೋಕಸಭಾ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲು ಅವಕಾಶ ಇದೆ. ಆದ್ದರಿಂದ ಎದುರಾಳಿಗಳ ಮೈತ್ರಿ ಕೂಟ ಯಶಸ್ವಿಯಾಗುವುದಿಲ್ಲ. ರಾಷ್ಟ್ರ ಮಟ್ಟದಲ್ಲಿಯೂ ಕೂಡ ಮೈತ್ರಿ ನಿರೀಕ್ಷೆ ಮಟ್ಟದಲ್ಲಿ ಇಲ್ಲ. ಚುನಾವಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ತೋರಲಿದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv