ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿಯಿರುವ ಈಶ ಫೌಂಡೇಶನ್ನ (Isha Foundation) ಆದಿಯೋಗಿ ಬೃಹತ್ ಪ್ರತಿಮೆಯ ಮುಂಭಾಗ ವಿವಿಧ ಆಸನಗಳನ್ನು ಅಭ್ಯಾಸ ಮಾಡುವ ಮೂಲಕ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day 2024) ಆಚರಿಸಲಾಯಿತು.
ಕರ್ನಾಟಕ ಗೋವಾ ಎನ್ಸಿಸಿ ಬೆಟಾಲಿಯನ್ನ ಡೆಪ್ಯುಟಿ ಡೈರೆಕ್ಟರ್ ಜನರಲ್, ಏರ್ ಕಮಾಂಡರ್ ಎಸ್.ಬಿ.ಅರುಣ್ ಕುಮಾರ್ ಉದ್ಘಾಟಿಸಿದರು. ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಉಪಸ್ಥಿತರಿದ್ದು, ವಿವಿಧ ಆಸನಗಳನ್ನೂ ಪ್ರದರ್ಶಿಸಿದರು. ಇದನ್ನೂ ಓದಿ: ಹೆಚ್ಡಿಕೆ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ದರ್ಶನ್ ಅಭಿಮಾನಿ – ಮಹಿಳೆ ವಿರುದ್ಧ ಮಂಡ್ಯದಲ್ಲಿ ದೂರು!
ಈ ವೇಳೆ ಮಾತನಾಡಿದ ಏರ್ ಕಮಾಂಡರ್ ಎಸ್.ಬಿ.ಅರುಣ್ ಕುಮಾರ್, ಒತ್ತಡ ಮತ್ತು ರೋಗ ಮುಕ್ತ ಜೀವನಕ್ಕೆ ಯೋಗ ಸಹಕಾರಿಯಾಗಿದ್ದು, ಭಾರತ ಮೂಲದ ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿರುವುದು ಭಾರತೀಯರೆಲ್ಲರೂ ಹೆಮ್ಮೆ ಪಡುವ ಸಂಗತಿ. ಯೋಗ ಕೇವಲ ದೈಹಿಕ ಸದೃಢತೆಗೆ ಮಾತ್ರವಲ್ಲದೇ ಮಾನಸಿಕ ಸದೃಢತೆಗೂ ಪೂರಕವಾಗಿದೆ. ದೇಹವನ್ನು ಹಗುರ ಮಾಡುವುದಲ್ಲದೇ ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ದೇಹ ಮತ್ತು ಮನಸ್ಸಿನ ಸಮತೋಲನೆಗೆ ಯೋಗ ಸಹಕಾರಿ ಎಂದು ಕಿವಿಮಾತು ಹೇಳಿದರು.
ಯೋಗಪ್ರದರ್ಶನದಲ್ಲಿ ಭಾರತೀಯ ಸೇನೆ, ಭಾರತೀಯ ಸೀಮಾ ಸುರಕ್ಷಾ ಪಡೆ ಮತ್ತು ರಾಷ್ಟ್ರೀಯ ಸೈನಿಕ ಪಡೆಗಳ ಸೈನಿಕರು ಹಾಗೂ ಎನ್ಸಿಸಿ ವಿದ್ಯಾರ್ಥಿಗಳು, ಈಶಾ ಸಂಸ್ಥೆಯ ಸ್ವಯಂ ಸೇವಕರು ಪಾಲ್ಗೊಂಡು ಸೂರ್ಯ ನಮಸ್ಕಾರ, ಪ್ರಾಣಾಯಾಮ, ಬಾಲಾಸನ, ನಾಡಿಶುದ್ಧಿ ಸೇರಿದಂತೆ ವಿವಿಧ ಸರಳ ಆಸನಗಳನ್ನು ಪ್ರದರ್ಶಿಸಿದರು. ಇದನ್ನೂ ಓದಿ: ಕರ್ನಾಟಕ ಪೊಲೀಸರು ಹೋಗಿ ಉತ್ತರ ಪ್ರದೇಶದಲ್ಲಿ ತಪ್ಪೇನೂ ಮಾಡಿಲ್ಲ: ಗೃಹ ಸಚಿವ ಪರಮೇಶ್ವರ್
ಈ ಸಂದರ್ಭದಲ್ಲಿ ಸಾರ್ವಜನಿಕರು ಯೋಗಾಭ್ಯಾಸ ಮಾಡಲು ಅನುಕೂಲವಾಗುವಂತೆ ಯೋಗ ಭವನವನ್ನು ಉದ್ಘಾಟಿಸಲಾಯಿತು. ಈ ಭವನ ಪ್ರತಿ ದಿನ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆ ವರೆಗೆ ಯೋಗಾಭ್ಯಾಸಕ್ಕಾಗಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದರು. ಇದನ್ನೂ ಓದಿ: ವಿಜಯೇಂದ್ರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಲಿ, ನಾನು ರಾಜ್ಯಾಧ್ಯಕ್ಷ ಆಗ್ತೀನಿ: ಯತ್ನಾಳ್