ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 94ಸಿ, 94ಸಿಸಿ ಹಕ್ಕುಪತ್ರ ಹಂಚಿಕೆಯಲ್ಲಿ ನಡೆದ ಅವ್ಯವಹಾರದಲ್ಲಿ ತಹಶೀಲ್ದಾರ್ ಅಂಬುಜ, ಗ್ರಾಮ ಲೆಕ್ಕಿಗ ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇಲಾಖಾವಾರು ತನಿಖೆಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ.
ಈ ಕುರಿತಂತೆ ತನಿಖೆ ನಡೆಸಲು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ನಾಗರಾಜ್ ಅವರನ್ನು ನೇಮಿಸಲಾಗಿತ್ತು. ತನಿಖಾಧಿಕಾರಿ ನಾಗರಾಜ್ ಶೃಂಗೇರಿ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ತಹಶೀಲ್ದಾರ್ ಅಂಬುಜ ಹಾಗೂ ಗ್ರಾಮ ಲೆಕ್ಕಿಗ ಸಿದ್ದಪ್ಪ ನ್ಯಾಯಾಂಗ ಬಂಧನದಲ್ಲಿದ್ದರು. ಸತೀಶ್, ಶಿವಕುಮಾರ್, ಸಂದೀಪ್ ಕಚೇರಿಗೆ ಗೈರು ಹಾಜರಾಗಿ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ವೇಳೆ ಕೇಸ್ ವರ್ಕರ್ ಪ್ರಕಾಶ್ 94ಸಿ ಹಾಗೂ 94ಸಿಸಿ ಅಡಿಯಲ್ಲಿ ಯಾವುದೇ ಹಕ್ಕುಪತ್ರ ಮಂಜೂರು ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಜೊತೆ ಹಿಂದೂ ದೇವಾಲಯಕ್ಕೆ ಭೇಟಿಕೊಟ್ಟ ಸಾರಾ ಅಲಿ ಖಾನ್
ವಿಷಯ ನಿರ್ವಹಕರ ಮಾಹಿತಿ ಪ್ರಕಾರ 671 ಬೋಗಸ್ ಹಕ್ಕುಪತ್ರ ವಿತರಿಸಲಾಗಿದೆ. ಎಲ್ಲಾ ಹಕ್ಕುಪತ್ರಗಳು ಡೀಮ್ಡ್ ಫಾರೆಸ್ಟ್, ಸೊಪ್ಪಿನಬೆಟ್ಟ ಹಾಗೂ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಸರ್ಕಾರದ ಸುತ್ತೋಲೆ ಉಲ್ಲಂಘನೆಯಾಗಿದ್ದು, ತಹಶೀಲ್ದಾರ್ ಅಂಬುಜ ಬೇರೊಂದು ಕಡತವನ್ನು ಸೃಷ್ಟಿಸಿದ್ದರು. ತಾಲೂಕು ಕಚೇರಿಯ ಹೊರ ಭಾಗದಲ್ಲಿ ಹಕ್ಕುಪತ್ರ ನೀಡುವ ಕಾರ್ಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಅರಣ್ಯ ಪ್ರದೇಶ, ಸೊಪ್ಪಿನಬೆಟ್ಟ, ಸೆಕ್ಷನ್ 4 ಪ್ರದೇಶಕ್ಕೆ ಹಕ್ಕುಪತ್ರವನ್ನು ನೀಡಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗಿದೆ ಎಂದು ತನಿಖಾಧಿಕಾರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಲವು ಕಡತಗಳಲ್ಲಿ ಆರ್.ಐ ಸತೀಶ್, ಲೆಕ್ಕಿಗರಾದ ಶಿವಕುಮಾರ್, ಸಂದೀಪ್ ಅವರ ಚೋಟ ಸಹಿ ಹಾಗೂ ಸೀಲ್ ಇರುವುದು ಕಂಡು ಬಂದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಡತಗಳ ರಚನೆಯಲ್ಲಿ ವ್ಯಕ್ತಿಯ ಕೈಬರಹ ಇರುವುದು ಪತ್ತೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆಗೆ ಕಂದಾಯ ಇಲಾಖೆ ಮುಂದಾಗಿದ್ದು, ಹಿರಿಯ ಉಪ ವಿಭಾಗಾಧಿಕಾರಿಗಳಾದ ಡಾ.ಹೆಚ್.ಎಲ್ ನಾಗರಾಜ್ ಅವರ ನೇತೃತ್ವದಲ್ಲಿ ಉಪ ನಿರ್ದೇಶಕರು, ಭೂ ದಾಖಲೆ, ಚಿಕ್ಕಮಗಳೂರು, ಇ.ಒ ತಾಲೂಕು ಪಂಚಾಯತಿ, ಶೃಂಗೇರಿ, ವಲಯ ಅರಣ್ಯಾಧಿಕಾರಿ, ಶೃಂಗೇರಿ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!