ಚಿಕ್ಕಮಗಳೂರು: 1,200 ವರ್ಷಗಳ ಹಿಂದೆ ಕಾಶ್ಮೀರದ ಶಾರದಾ ಪೀಠದಿಂದ ಶಂಕರಾಚಾರ್ಯರು ತಂದಿದ್ದ ಶೃಂಗೇರಿ ಶಾರದಾಂಭೆಯ ಮೂರ್ತಿಯ ಪ್ರತಿರೂಪವನ್ನು ಶೃಂಗೇರಿ ಮಠದ ವತಿಯಿಂದ ಕಾಶ್ಮೀರದ ಶಾರದಾ ಪೀಠಕ್ಕೆ ಮಾಡಿಸಿ ಕೊಡಲು ಶೃಂಗೇರಿ ಮಠದ ಗುರುಗಳು ಒಪ್ಪಿಗೆ ಸೂಚಿಸಿದ್ದಾರೆ.
ಕಾಶ್ಮೀರ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್ ಶೃಂಗೇರಿಗೆ ಬಂದು ಮಠದ ಗುರಗಳಾದ ಭಾರತೀ ತೀರ್ಥ ಹಾಗೂ ವಿಧುಶೇಖರ ಶ್ರೀಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಶೃಂಗೇರಿ ಮಠದ ಗುರುಗಳು ಶೃಂಗೇರಿ ಶಾರದಾಂಬೆಯ ಮೂಲ ವಿಗ್ರಹದಂತಹಾ ವಿಗ್ರಹವನ್ನೇ ಕಾಶ್ಮೀರ ಶಾರದಾ ಮಠಕ್ಕೆ ಕಳುಹಿಸಿ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್ಬುಕ್ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯ ಕುಪ್ವಾರ ಜಿಲ್ಲೆಯ ಟ್ವಿಟಾಲ್ ಈ ದೇವಸ್ಥಾನ ನಿರ್ಮಾಣವಾಗಲಿದ್ದು, 2021ರ ಡಿಸೆಂಬರ್ನಲ್ಲೇ ದೇವಸ್ಥಾನಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿದೆ. ದೇವಸ್ಥಾನ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಾರದಾ ಸೇವಾ ಸಮಿತಿ ಸದಸ್ಯರು ಶೃಂಗೇರಿಗೆ ಬಂದು ಶ್ರೀಗಳ ಜೊತೆ ಚರ್ಚಿಸಿದ್ದಾರೆ. ಹಿಂದೆ ಕಾಶ್ಮೀರಿ ಶೃಂಗೇರಿ ಪೀಠದಲ್ಲಿದ್ದ ಮೂಲ ವಿಗ್ರಹ ಈಗ ಶೃಂಗೇರಿ ಮಠದಲ್ಲಿದೆ. ಹಾಗಾಗಿ, ಅದೇ ರೂಪವನ್ನ ಹೋಲುವ ಶೃಂಗೇರಿ ಶಾರದಾಂಭೆಯ ಪ್ರತಿರೂಪದ ಮೂರ್ತಿಯನ್ನ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮಠದ ಗುರುಗಳು ಕಾಶ್ಮೀರ ಶಾರದಾ ಸೇವಾ ಸಮಿತಿಯ ರವೀಂದ್ರ ಪಂಡಿತ್ಗೆ ಭರವಸೆ ನೀಡಿದ್ದಾರೆ.
ಕಾಶ್ಮೀರದಲ್ಲಿ 2021ರ ಡಿಸೆಂಬರ್ 2ರಂದೇ ಭೂಮಿ ಪೂಜೆ ನಡೆದಿದ್ದು, ದೇಗುಲದ ವಾಸ್ತುಶಿಲ್ಪ ಹಿಂದಿನ ಸರ್ವಜ್ಞ ಪೀಠದ ಮಾದರಿಯಲ್ಲೇ ಇರಲಿದೆ. ದೇವಾಲಯ ಕಲ್ಲುಗಳಿಂದ ನಿರ್ಮಾಣವಾಗಲಿದ್ದು ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿದೆ. ಚಳಿಗಾಲ ಹೊರತುಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಇರಲಿದೆ. 1,200 ವರ್ಷಗಳ ಹಿಂದೆ ಕಾಶ್ಮೀರದ ಶಾರದಾ ಪೀಠದಿಂದ ಶಂಕರಾಚಾರ್ಯರು ತಂದಿದ್ದ ಶೃಂಗೇರಿ ಶಾರದಾಂಭೆಯ ಮೂರ್ತಿಯು ಶ್ರೀಗಂಧದ ಮೂರ್ತಿ. 1,200 ವರ್ಷಗಳ ಹಿಂದೆ ಶ್ರೀಗಳು ಪ್ರತಿಷ್ಠಾಪಿಸಿದ್ದು ಅದೇ ವಿಗ್ರಹ. 650 ವರ್ಷಗಳ ಹಿಂದೆ ಶೃಂಗೇರಿ ಮಠದ 12ನೇ ಪೀಠಾಧಿಪತಿಗಳಾದ ವಿದ್ಯಾರಣ್ಯರು ಬಂಗಾರವೇ ಅಧಿಕವಿರುವ ಪಂಚಲೋಹದಿಂದ ಕೂಡಿದ ಹೊಸ ವಿಗ್ರಹವನ್ನ ಪ್ರತಿಷ್ಠಾಪಿಸಿದ್ದರು. ಪ್ರಸ್ತುತ ಸರಸ್ವತಿ ಮಂದಿರದಲ್ಲಿ ಆ ವಿಗ್ರಹವಿದೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ
ವಿದ್ಯಾಶಂಕರ ದೇವಾಲಯದಲ್ಲಿರುವ ಗಂಧದ ವಿಗ್ರಹ ಮೂರು ಅಡಿ ಎತ್ತರವಿದ್ದು, ಎರಡು ಅಡಿ ಅಗಲವಿದೆ. ಬಲಭಾಗದ ಒಂದು ಕೈಯಲ್ಲಿ ಗಿಳಿ, ಮತ್ತೊಂದು ಕೈನಲ್ಲಿ ಅಭಯಹಸ್ತವಿದೆ. ಎಡಭಾಗದ ಒಂದು ಕೈಯಲ್ಲಿ ಸ್ಫಟಿಕದ ಜಪಮಾಲೆ, ಇನ್ನೊಂದು ಕೈಯಲ್ಲಿ ಪುಸ್ತಕವಿದೆ. ಎಡಗಾಲನ್ನು ಕೆಳಗಿಟ್ಟುಗೊಂಡು ಬಲಗಾಲನ್ನು ಮಡಚಿಕೊಂಡು ಕೂತಿರುವ ವಿಗ್ರಹವದು. ಈಗ ಅದೇ ವಿಗ್ರಹದ ಪ್ರತಿರೂಪವನ್ನು ಶೃಂಗೇರಿಯ ಗುರುವತ್ರಯರು ಕಾಶ್ಮೀರದ ಶಾರದಾಪೀಠಕ್ಕೆ ಮಾಡಿಸಿ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ.