ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಶ್ರೀಮುರಳಿ ಬೇರೆಯದ್ದೇ ಗೆಟಪ್ಪಿನಲ್ಲಿರೋ ಸ್ಟಿಲ್ಲುಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇದೀಗ ರಾಜಸ್ಥಾನದ ಮರುಭೂಮಿಯಲ್ಲಿ ಈ ಚಿತ್ರದ ಚಿತ್ರೀಕರಣ ಸಾಂಗವಾಗಿ ನೆರವೇರುತ್ತಿದೆ.
ಖುದ್ದು ಶ್ರೀಮುರಳಿಯವರೇ ಮರುಭೂಮಿಯಲ್ಲಿನ ಚಿತ್ರೀಕರಣದ ಬಗ್ಗೆ ಥ್ರಿಲ್ ಆಗಿದ್ದಾರೆ. ನಿರ್ದೇಶಕ ಭರ್ಜರಿ ಚೇತನ್ ಅವರ ಕಾರ್ಯಶೈಲಿ ಮತ್ತು ಲೊಕೇಷನ್ನುಗಳನ್ನು ಹುಡುಕುವ ಚಾಕಚಕ್ಯತೆಯ ಬಗ್ಗೆ ಶ್ರೀಮುರಳಿ ಮನಸೋತಿದ್ದಾರೆ. ಇದುವರೆಗೂ ಮರುಭೂಮಿಯಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣವಾಗಿದೆ. ಆದರೆ ಚೇತನ್ ಈವರೆಗೂ ಕನ್ನಡಿಗರು ನೋಡಿರದ ಆಂಗಲ್ ಗಳಲ್ಲಿ, ಯಾರೂ ಹೆಚ್ಚಾಗಿ ಹೋಗದ ಮರುಭೂಮಿಯ ಪ್ರದೇಶಗಳನ್ನೇ ಚಿತ್ರೀಕರಣಕ್ಕೆ ಆಯ್ದುಕೊಳ್ಳುತ್ತಿದ್ದಾರಂತೆ.
ನಮ್ಮ ನಿರ್ದೇಶಕರು ಶೂಟಿಂಗ್ ಗೆ ಆಯ್ದುಕೊಳ್ಳುವ ಪ್ರದೇಶಗಳೇ ನಮಗೆಲ್ಲ ಅಚ್ಚರಿ ಹುಟ್ಟಿಸುತ್ತೆ. ಪ್ರತೀ ಕ್ಷಣವೂ ಹೊಸ ಹುಡುಕಾಟ ನಡೆಸೋ ನಿರ್ದೇಶಕರ ಜೊತೆ ಕೆಲಸ ಮಾಡೋದೇ ಸಂತಸದ ವಿಚಾರ ಅಂತ ಒಟ್ಟಾರೆ ಚಿತ್ರೀಕರಣದ ಅನುಭವಗಳನ್ನು ಶ್ರೀ ಮುರಳಿ ತೆರೆದಿಟ್ಟಿದ್ದಾರೆ.
ಇದೀಗ ರಾಜಸ್ಥಾನದ ಮರುಭೂಮಿಯಲ್ಲಿ ಪ್ರತಿಕೂಲವಾದ ವಾತಾವರಣವಿದೆ. ಅದರ ನಡುವೆಯೂ ಇಡೀ ಚಿತ್ರ ತಂಡ ಅಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಭರ್ಜರಿ ಚೇತನ್ ಕೂಡಾ ಇದಕ್ಕೆ ಪೂರಕವಾಗಿ, ಚಿತ್ರತಂಡಕ್ಕೆ ಹುಮ್ಮಸ್ಸು ತುಂಬುತ್ತಾ ಚಿತ್ರೀಕರಣ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv