ಬೆಂಗಳೂರು: ಈ ಹಿಂದೆ ಬಹದ್ದೂರ್ ಮತ್ತು ಭರ್ಜರಿ ಎಂಬೆರಡು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿರುವವರು ಚೇತನ್ ಕುಮಾರ್. ಈ ಎರಡೇ ಚಿತ್ರಗಳ ಮೂಲಕ ಯುವ ಮನಸುಗಳ ಡಾರ್ಲಿಂಗ್ ಅನ್ನಿಸಿಕೊಂಡಿರೋ ಚೇತನ್ ಪಾಲಿಗೆ ಪ್ರೇಕ್ಷಕರ ಆಕಾಂಕ್ಷೆಗಳೇನೆಂಬುದು ಸುಸ್ಪಷ್ಟ. ಈ ಬಾರಿ ಅವರದನ್ನು ಮತ್ತಷ್ಟು ಸ್ಪಷ್ಟವಾಗಿಸಿಕೊಂಡು ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಈಗಾಗಲೇ ಕೆಂಡದಂಥಾ ನಿರೀಕ್ಷೆ ಹುಟ್ಟು ಹಾಕಿರೋ ಭರಾಟೆಯನ್ನು ಫ್ಯಾಮಿಲಿ ಪ್ಯಾಕೇಜ್ ಆಗಿಯೂ ರೂಪಿಸುವ ನಿಟ್ಟಿನಲ್ಲಿ ಚೇತನ್ ಶ್ರಮ ವಹಿಸಿದ್ದಾರೆ. ಈ ಚಿತ್ರ ಆ ಕಾರಣದಿಂದಲೇ ಕುಟುಂಬ ಸಮೇತವಾಗಿ ನೋಡಿ ಎಂಜಾಯ್ ಮಾಡುವಂತೆ ಮೂಡಿ ಬಂದಿದೆಯಂತೆ.
ಇದೊಂದು ಪಕ್ಕಾ ಮಾಸ್ ಕಥನ ಹೊಂದಿರೋ ಚಿತ್ರ. ಶ್ರೀಮುರಳಿ ಈ ಹಿಂದೆ ಎಂದೂ ನಟಿಸದ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಆ ಛಾಯೆಯೇ ಕುಟುಂಬ ಸಮೇತರಾಗಿ ಪ್ರೇಕ್ಷಕರನ್ನೆಲ್ಲ ಚಿತ್ರಮಂದಿರದತ್ತ ಕರೆತರುವಷ್ಟು ಶಕ್ತವಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಆದರೆ, ಇದರಲ್ಲಿರೋ ಮಾಸ್ ಸನ್ನಿವೇಶಗಳು ಮಾತ್ರ ಬೇರೆಯದ್ದೇ ದಿಕ್ಕಿನಲ್ಲಿವೆ. ಭರಾಟೆಯಲ್ಲಿ ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋ ಖಳರ ಸಂಖ್ಯೆಯೇ ಇದೊಂದು ಭರ್ಜರಿ ಫೋರ್ಸ್ ಹೊಂದಿರುವ ಮಾಸ್ ಚಿತ್ರವೆಂಬುದಕ್ಕೆ ಪುರಾವೆಯಂತಿದೆ.
ಭರಾಟೆಯಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಬ್ರದರ್ಸ್ ಖಳರಾಗಿ ಅಬ್ಬರಿಸಿದರೆ, ಅವರೊಂದಿಗೆ ಮತ್ತೆ ಹದಿನಾಲಕ್ಕು ಮಂದಿ ಖಳ ನಟರು ಚಿತ್ರ ವಿಚಿತ್ರವಾದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಹದಿನೇಳೂ ಪಾತ್ರಗಳೂ ಕೂಡಾ ಒಂದಕ್ಕೊಂದು ಭಿನ್ನವಾಗಿದೆ ಎಂಬುದು ಈಗಾಗಲೇ ಟ್ರೇಲರ್ಗಳ ಮೂಲಕವೇ ಸಾಬೀತಾಗಿದೆ. ಮಾಮೂಲಿಯಂತಾದರೆ ಒಂದು ಚಿತ್ರದಲ್ಲಿ ಒಂದಿಬ್ಬರು ಖಳರಿರುತ್ತಾರೆ. ಆದರೆ ಈ ಪಾಟಿ ಖಳ ನಟರಿದ್ದಾರೆಂಬುದೇ ಭರಾಟೆಯತ್ತ ಮಾಸ್ ಅಭಿರುಚಿಯ ಪ್ರೇಕ್ಷಕರೆಲ್ಲ ವಾಲಿಕೊಳ್ಳುವಂತಾಗಿದೆ. ಅಂತೂ ಭರಾಟೆ ಈ ವಾರವೇ ಬಿಡುಗಡೆಯಾಗಲಿದೆ. ಒಂದೆರಡು ದಿನ ಕಳೆಯುತ್ತಲೇ ಭರಾಟೆ ನಿಮ್ಮೆದುರು ಆರ್ಭಟಿಸಲಿದೆ.