ತುಮಕೂರು: ಸಿದ್ದಗಂಗಾ ಶ್ರೀಗಳು ವಿಮಾನ ಪ್ರಯಾಣಕ್ಕೆ ಒಲ್ಲೆ ಎಂದು ಹೇಳುತ್ತಿದ್ದರು. ಹೀಗಾಗಿ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯೂ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ.
ಶ್ರೀಗಳು ಸನ್ಯಾಸ ದೀಕ್ಷೆ ಪಡೆದು ಸುಮಾರು 89 ವರ್ಷಗಳ ಕಾಲ ಕಳೆದಿದ್ದಾರೆ. ಶ್ರೀಗಳು ಎಷ್ಟು ಸರಳವಾಗಿದ್ದರು ಎಂದರೆ ತಮಗೆ ಗ್ರಾಮೀಣ ಜನರ ಒಡನಾಟವೇ ಸಾಕೆಂದು ಮಠ, ಹಳ್ಳಿ ಕಡೆ ಹೆಚ್ಚಾಗಿ ಪ್ರಯಾಣಿಸುತ್ತಿದ್ದರು. ವಿದೇಶದಲ್ಲಿದ್ದ ಭಕ್ತರು ಎಷ್ಟೇ ಕರೆದರೂ ಶ್ರೀಗಳು ವಿಮಾನ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದರು.
ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ನಗರಗಳಿಗೆ ಹೋಗಿದ್ದಾರೆ. ಆದರೆ ವಿದೇಶ ಪ್ರಯಾಣ ಎಂದೂ ಮಾಡಲಿಲ್ಲ. ಅವರು 20ನೇ ಶತಮಾನದ ಆರಂಭದಲ್ಲಿ ಎತ್ತಿನಗಾಡಿ, ಕುದುರೆದಾರೋಟು, ರೈಲಿನಲಷ್ಟೇ ಪ್ರಯಾಣಿಸುತ್ತಿದ್ದರು. 70ರ ದಶಕದ ನಂತರ ಶ್ರೀಗಳು ಕಾರು, ವಿಮಾನ, ಹೆಲಿಕಾಪ್ಟರ್ ನನ್ನು ಹತ್ತಿದ್ದರು.
ಐದು ಬಾರಿ ಮಾತ್ರ ವಿಮಾನ ಪ್ರಯಾಣ!
ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಕೇವಲ ಐದಾರು ಬಾರಿ ಮಾತ್ರ ವಾಯು ಮಾರ್ಗದಲ್ಲಿ ಸಂಚರಿಸಿದ್ದರು. ಒಮ್ಮೆ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಹೆಲಿಕಾಪ್ಟರ್ ನಲ್ಲಿ ಹೋಗಿದ್ದರು. ಬಳಿಕ ದಾವಣಗೆರೆಗೆ ಹೋಗಿದ್ದರು. ನವದೆಹಲಿಯ ಸುತ್ತೂರು ಮಠದ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನದಲ್ಲಿ ಹೋಗಿದ್ದರು. ಕೊನೆಯದಾಗಿ ಶ್ರೀಗಳು ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ನಲ್ಲಿ ಚೆನ್ನೈಗೆ ಹೋಗಿ ಬಂದಿದ್ದರು. ಇದು ಬಿಟ್ಟು ಬೇರೆ ಎಲ್ಲೂ ಶ್ರೀಗಳು ವಿಮಾನ ಪ್ರಯಾಣ ಮಾಡಲಿಲ್ಲ.
ದೂರದ ಬೀದರ್ ಗೆ ಹೋಗಬೇಕಾದರೂ ಅವರು ಕಾರಿನಲ್ಲಿ ಹೋಗುತ್ತಿದ್ದರು. ಅಷ್ಟು ಸರಳ ಜೀವನವನ್ನು ಶ್ರೀಗಳು ನಡೆಸುತ್ತಿದ್ದರು. ಶ್ರೀಗಳು ಕಾರಿನಲ್ಲೂ ಯಾವುದೇ ಬೆಂಗಾವಲು ಪಡೆಯಿಲ್ಲದೆ, ಕಾರಿಗೆ ನಾಮಫಲಕವನ್ನು ಹಾಕಿಕೊಳ್ಳದೇ ಸಂಚರಿಸುತ್ತಿದ್ದರು. ಶ್ರೀಗಳು ಮಠ ತೊರೆದು ಬೇರೆ ಕಡೆಗೆ ತೆರಳಿದರೂ ನಿತ್ಯದ ಇಷ್ಟಲಿಂಗ ಪೂಜೆಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು.
https://www.youtube.com/watch?v=WTHN3QhN8Zg
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv