ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಇಷ್ಟಲಿಂಗ ಪೂಜೆ ನೆರವೇರಿಸಿ, ಮಂತ್ರ ಪಠಿಸಿದ ಶ್ರೀಗಳು

Public TV
1 Min Read
SIDDAGANGA SRI 1

ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದ್ದು, ಇಂದು ಬೆಳಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀಗಳು ಮಂತ್ರ ಪಠಣ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಪೂಜೆ ವೇಳೆ ಶ್ರೀಗಳ ಶಿಷ್ಯವೃಂದ ಜೊತೆ ಗೂಡಿ ಶಿವನಾಮ ಸ್ಮರಣೆ ಮಾಡಿದ ಶ್ರೀಗಳು, ಈ ಮೂಲಕ ಭಕ್ತಾಧಿಗಳಲ್ಲಿ ಇದ್ದಂತ ಆತಂಕ ದೂರ ಮಾಡಿದರು. ಬೆಳಗ್ಗೆ ಶ್ರೀಗಳ ಆರೋಗ್ಯ ತಪಾಸಣೆ ಮಾಡಿ ಮಾಧ್ಯಮಕ್ಕೆ ಮಾಹಿತಿ ನೀಡಿದ ವೈದ್ಯ ಡಾ.ಪರಮೇಶ್, ಶ್ರೀಗಳ ಶ್ವಾಸಕೋಶದಲ್ಲಿನ ಸೋಂಕು ಕಡಿಮೆ ಆಗಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ಆದ್ರು ನಾಲ್ಕು ದಿನಗಳ ಕಾಲ ಆ್ಯಂಟಿ ಬಯಾಟಿಕ್ ನೀಡಬೇಕು ಎಂದು ಸ್ಪಷ್ಟಪಡಿಸಿದ್ದರು.

vlcsnap 2019 01 01 09h24m30s838

ಸಂಜೆ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಅವರ ತಂಡ ಇನ್ನೊಮ್ಮೆ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿತು. ಜೊತೆಗೆ ಜಯದೇವ ಆಸ್ಪತ್ರೆ ವೈದ್ಯ ಡಾ.ನಾಗೇಶ್ ಕೂಡಾ ಶ್ರೀಗಳ ಹೃದಯ ತಪಾಸಣೆ ಮಾಡಿದರು. ಈ ವೇಳೆ ಮಾತನಾಡಿದ ಡಾ.ರವೀಂದ್ರ ಅವರು, ಶ್ರೀಗಳು ಚೇತರಿಸಿಕೊಂಡಿದ್ದಾರೆ. ಆದರೆ ಶ್ರೀಗಳ ಶ್ವಾಸಕೋಶದಲ್ಲಿ ನೀರು ಕಡಿಮೆಯಾಗಿಲ್ಲ. ಹಾಗಾಗಿ ಸ್ವಲ್ಪ ಮಟ್ಟಿನ ಸೋಂಕು ಇದೆ. ಪ್ರೋಟಿನ್ ಅಂಶ ಕಡಿಮೆ ಇರುವುದರಿಂದ ಶ್ವಾಸಕೋಶಕ್ಕೆ ನೀರು ಸೇರಿಕೊಳ್ಳುತ್ತಿದೆ. ಅಲ್ಲದೆ ಸಾಮಾನ್ಯವಾಗಿ ದೇಹದಲ್ಲಿ 3.5 ರಿಂದ 4 ಗ್ರಾಂ ನಷ್ಟು ಪ್ರೋಟಿನ್ ಇರಬೇಕು. ಆದರೆ ಶ್ರೀಗಳ ದೇಹದಲ್ಲಿ ಕೇವಲ 2 ರಿಂದ 2.5 ಗ್ರಾಂ ನಷ್ಟು ಮಾತ್ರ ಪ್ರೋಟಿನ್ ಇದೆ. ಹಾಗಾಗಿ ಬಾಯಿ ಮತ್ತು ಟ್ಯೂಬ್ ಮೂಲಕ  ಪ್ರೋಟಿನ್ ನೀಡಲಾಗುತ್ತಿದೆ ಎಂದರು. ಉಳಿದಂತೆ ಶ್ರೀಗಳ ಪಲ್ಸ್ ಮತ್ತು ಬಿ.ಪಿ. ಸಹಜವಾಗಿದೆ. ಶ್ರೀಗಳು ಎದ್ದು ಓಡಾಡಲು ಇನ್ನು ಕೆಲ ಸಮಯ ಬೇಕಾಗಬಹುದು ಎಂದು ಸ್ಪಷ್ಟಪಡಿಸಿದರು.

https://www.youtube.com/watch?v=pdPt-TVIzFE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *