ಕೊಲಂಬೋ: ಶ್ರೀಲಂಕಾದಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಹದಗೆಡುತ್ತಿದೆ. ಹಂಗಾಮಿ ಅಧ್ಯಕ್ಷರಾಗಿ ರನೀಲ್ ವಿಕ್ರಮಸಿಂಘೆ ನೇಮಕಗೊಂಡ ಬೆನ್ನಲ್ಲೇ ಅಲ್ಲಿನ ಜನ ಮತ್ತೆ ಸಿಡಿದೆದ್ದಿದ್ದಾರೆ. ವಿಕ್ರಮಸಿಂಘೆ ಕಚೇರಿಗೆ ನುಗ್ಗಿ ಜನ ದಾಂಧಲೆ ನಡೆಸಿದ್ದಾರೆ.
ಸೇನಾ ಪಡೆಗಳ ಅಶ್ರುವಾಯು ಸೇರಿ ಹಲವು ರೀತಿಯ ಬಲ ಪ್ರಯೋಗಕ್ಕೂ ಬೆದರದೇ ಅಧ್ಯಕ್ಷರ ಭವನದ ಬಳಿಕ ಪ್ರಧಾನಿ ಕಚೇರಿಯನ್ನೂ ಆಕ್ರಮಿಸಿ ಗಲಾಟೆ ಮಾಡಿದ್ದಾರೆ. ಘರ್ಷಣೆಯಲ್ಲಿ ಓರ್ವ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕ್ಷಣ ಕ್ಷಣಕ್ಕೂ ಬೀದಿಗಳಲ್ಲಿ ಪ್ರತಿಭಟನೆ ಹೆಚ್ಚುತ್ತಿದೆ. ಇದನ್ನೂ ಓದಿ: ರಾಜಪಕ್ಸೆ ಪಲಾಯನ – ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಸರ್ಕಾರಿ ಸ್ವಾಮ್ಯದ ರೆಡಿಯೋ, ಟಿವಿ ಚಾನೆಲ್ಗಳ ಮೇಲೆಯೂ ದಾಳಿ ನಡೆದಿದೆ. ಪರಿಸ್ಥಿತಿ ಹತೋಟಿಗೆ ತರಲು ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಕೊಲಂಬೋ ಸೇರಿ ಪಶ್ಚಿಮ ಪ್ರಾಂತ್ಯದಲ್ಲಿ ಕಫ್ರ್ಯೂ ವಿಧಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಹೊಣೆಯನ್ನು ಸೇನೆಗೆ ನೀಡಲಾಗಿದೆ. ಇದನ್ನೂ ಓದಿ: ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ನಾವು ಸಹಕಾರ ನೀಡಿಲ್ಲ ಎಂದ ಭಾರತ
ರಾಜೀನಾಮೆ ನೀಡದ ಗೊಟಬಯ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ತೆರಳಲಿದ್ದಾರೆ ಎನ್ನಲಾಗ್ತಿದೆ. ಮಾಲ್ಡೀವ್ಸ್ಗೆ ಎಸ್ಕೇಪ್ ಆಗಲು ಅಲ್ಲಿನ ಮಾಜಿ ಅಧ್ಯಕ್ಷ ನಶೀದ್ ಸಹಾಯ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಪ್ರಾಣಭೀತಿಯಲ್ಲಿ ಗೊಟಬಯ ಸೋದರ, ಮಾಜಿ ಸಚಿವ ಬಸಿಲ್ ಕೂಡ ವಿದೇಶಕ್ಕೆ ಪರಾರಿಯಾಗಿದ್ದಾರೆ. ಗೊಟಬಯ ಮಾಲ್ಡೀವ್ಸ್ಗೆ ತೆರಳಲು ಭಾರತ ನೆರವು ನೀಡಿದೆ ಎಂಬ ಆರೋಪವನ್ನು ಶ್ರೀಲಂಕಾದಲ್ಲಿರೋ ಭಾರತೀಯ ಹೈಕಮೀಷನ್ ತಳ್ಳಿಹಾಕಿದೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ ಅಂತ ಭಾರತದ ರಫ್ತು ಸಂಘಟನೆಗಳ ಒಕ್ಕೂಟ ಹೇಳಿದೆ. ಇದೆಲ್ಲದರ ಮಧ್ಯೆ ಲಂಕಾದಲ್ಲಿ ಔಷಧಿಗಳ ಬಿಕ್ಕಟ್ಟು ಎದುರಾಗಿದ್ದು, ಕಾಯಿಲೆ ಬೀಳದಂತೆ ಆರೋಗ್ಯ ಕಾಪಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.