ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ದೇಶಾದ್ಯಂತ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಲಕ್ಷ ರೂ. ದೇಣಿಗೆ ನೀಡಲಾಗುತ್ತಿದೆ.
ಈ ಸಂಬಂಧ ಶ್ರೀ ಕ್ಷೇತ್ರದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಈ ಮೂಲಕ ಘೋಷಣೆ ಮಾಡಲಾಗಿದೆ. ರಾಮಮಂದಿರವು ಶತಮಾನದ ವಿಸ್ಮಯವಾಗಿ ಅದ್ಭುತ ಮಂದಿರವಾಗಿ ಮೂಡಿಬರಲಿ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉಲ್ಲೇಖಿಸಿದ್ದಾರೆ.
Sri Kshetra Dharmasthala Manjunatha Temple announces donation of ₹25 Lakhs for Sri Rama Janam Bhoomi Theerth Kshetra…
Posted by Sri Dharmasthala Manjunatha Temple on Wednesday, January 13, 2021
ಈ ಹಿಂದೆ ನಟಿ ಪ್ರಣಿತಾ ಸಹ ಕೈ ಜೋಡಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಈ ಕುರಿತು ಟ್ವೀಟ್ಟರ್ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದ ನಟಿ, ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಭಾಗವಾಗಿ ಆರಂಭಿಕವಾಗಿ 1 ಲಕ್ಷ ರೂ. ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದೇನೆ. ನೀವೂ ಸಹ ಇದರ ಭಾಗವಾಗಿ ಐತಿಹಾಸಿಕ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದರು.
ವೀಡಿಯೋದಲ್ಲಿ ಸಹ ಮಾತನಾಡಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ನಿಧಿ ಸಮರ್ಪಣ ಅಭಿಯಾನವನ್ನು ನಡೆಸಲಾಗುತ್ತಿದೆ. ಇದಕ್ಕೆ ನಾನೂ ಸಹ ಕೊಡುಗೆ ನೀಡುತ್ತಿದ್ದೇನೆ. ನೀವೂ ಸಹ ಭಾಗಿಯಾಗಿ ಜೈ ಶ್ರೀರಾಮ್ ಎಂದು ತಿಳಿಸಿದ್ದರು.
ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ ಶುರುವಾಗಿದೆ . ಇದಕ್ಕೆ ನನ್ನ ಕಡೆಯಿಂದ ಕಿರು ಕಾಣಿಕೆಯಾಗಿ ರೂ. ೧ ಲಕ್ಷ ಸಮರ್ಪಿಸುತಿದ್ದೇನೆ . ಬನ್ನಿ ಈ ಐತಿಹಾಸಿಕ ಕಾರ್ಯಕ್ಕೆ ಕೈ ಜೋಡಿಸಿ
ಜೈ ಶ್ರೀ ರಾಮ್ #RamMandirNidhiSamarpan pic.twitter.com/i7cVpW4auW
— Pranitha Subhash (@pranitasubhash) January 13, 2021