– ಚಾಣಕ್ಯನ ಸ್ಥಿತಿ ನೋಡಿ ಮರುಕ ಬರ್ತಿದೆ
ಬಾಗಲಕೋಟೆ: ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತೆ. ಜಾಸ್ತಿ ಉರಿದ ಬಿಜೆಪಿಯ ದೀಪ ಶೀಘ್ರ ಆರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದಾಟ್ ಗವರ್ನಮೆಂಟ್ ಡೇಸ್ ಆರ್ ನಂಬರ್’ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ಪೌರತ್ವ ತಿದ್ದುಪಡಿ ಮಸೂದೆ ಜಾರಿ ಬಂದ ಮೇಲೆ ಜಾರ್ಖಂಡ್ ಚುನಾವಣೆ ಮೊದಲ ಪರೀಕ್ಷೆ. ಅವರದ್ದೇ ಸರ್ಕಾರ ಇದ್ದರೂ ಬಿಜೆಪಿ ಸೋಲು ಅನುಭವಿಸಿದೆ. ದೇಶದಲ್ಲಿ ಮುಂಬರುವ ಎಲ್ಲಾ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲು ಖಚಿತ ಎಂದರು.
ಬಿಜೆಪಿ ಚಾಣಕ್ಯ ಅಮಿತ್ ಶಾ 12 ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಚಾಣುಕ್ಯನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಒಬ್ಬ ಮನುಷ್ಯ ಎಲ್ಲ ವ್ಯಕ್ತಿಗಳನ್ನು ಸ್ವಲ್ಪ ಸಮಯದವರೆಗೂ ಮೋಸ ಮಾಡಬಹುದು. ಕೆಲವು ಜನರನ್ನು ಕೊನೆವರೆಗೂ ಮೋಸ ಮಾಡಬಹುದು. ಆದರೆ ಎಲ್ಲ ಜನರನ್ನು ಎಲ್ಲ ಸಮಯದವರೆಗೂ ಮೋಸ ಮಾಡಲು ಆಗಲ್ಲ. ಇದು ಪ್ರಧಾನಿ ಮೋದಿ ಅವರಿಗೆ ಅನ್ವಯಿಸುತ್ತದೆ ಎಂದರು.
ಪೌರತ್ವ ಕಾಯ್ದೆ ವಿರೋಧದ ವಿಚಾರ ಕಾಂಗ್ರೆಸ್ಸಿಗರು ದೇಶದ್ರೋಹಿಗಳು ಎಂದಿದ್ದ ಡಿಸಿಎಂ ಗೋವಿಂದ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಮಾತು ಕಾರಜೋಳ ವ್ಯಕ್ತಿತ್ವಕ್ಕೆ ಶೋಭೆ ತರುವ ಹೇಳಿಕೆಯಲ್ಲ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಆರುವರೆ ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪಕ್ಷ ಹುಟ್ಟಿದ್ದೆ 1950ರಲ್ಲಿ. ಕಾರಜೋಳ ತಮ್ಮ ಪಕ್ಷದ ಇತಿಹಾಸ ನೋಡಿಕೊಂಡು ಮಾತನಾಡಲಿ. ಅವರು ಕೂಡಲೇ ಕಾಂಗ್ರೆಸ್ ಪಕ್ಷದ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.
ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕುಡಿಯುವ ನೀರಿನ ಯೋಜನೆಗೆ ಗೋವಾದ ಮಾತು ಕೇಳಿ ಕೇಂದ್ರ ತಡೆಯಾಜ್ಞೆ ನೀಡಿದೆ. ಕೇಂದ್ರದ ನೀತಿ ಮತ್ತಷ್ಟು ನಿರಾಸೆ ಮೂಡಿಸಿದ್ದು, ತಮ್ಮದೇ ಕೇಂದ್ರ ಸರ್ಕಾರದ ಎದುರು ಮಾತನಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಗಟ್ಸ್ ಇಲ್ಲ. ಬಿಎಸ್ವೈ 24 ಗಂಟೆ ಅನ್ನೋದು ಬಾಯಿಪಾಠ ಮಾಡಿದ್ದಾರೆ. ಅವರನ್ನು ಯಾವುದೇ ವಿಚಾರ ಕೇಳಿದರು, 24 ಗಂಟೆಯಲ್ಲಿ ಮಾಡುತ್ತೇನೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ತಂದುಕೊಡುವುದಾಗಿ ಹೇಳಿದ್ದರು. ಆದರೆ ಅವರು ಅದನ್ನು 24 ವರ್ಷ ಅಥವಾ ಶತಮಾನ ಎಂದು ತಿಳಿದುಕೊಂಡಿದ್ದಾರೇನೋ? ಎಂದು ವ್ಯಂಕ್ಯವಾಡಿದರು. ಸಚಿವ ಬೊಮ್ಮಾಯಿ ಅವರು ರಕ್ತದಲ್ಲಿ ಬರೆದು ಕೊಟ್ಟಿದ್ದರು. ರಾಜ್ಯ ಬಿಜೆಪಿ ನಾಯಕರಿಗೆ ಕೊನೆ ಪಕ್ಷ ತಡೆಯಾಜ್ಞೆಯನ್ನು ತೆರವು ಮಾಡಲು ಕೂಡ ಆಗಲಿಲ್ಲ ಎಂದು ಟೀಕಿಸಿದರು.