ತಿರುವನಂತಪುರಂ: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಶಾಸಕರಿಗೆ ಸುಂದರ, ಸುರಕ್ಷಿತ ಸ್ಥಳಗಳ ನೀಡುವುದಾಗಿ ಆಫರ್ ನೀಡಿದೆ.
ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಕೇರಳ ಪ್ರವಾಸೋದ್ಯಮ, ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಬಳಿಕ ನಾವು ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ, ಸುರಕ್ಷಿತ ಹಾಗೂ ಸುಂದರ ರೆಸಾರ್ಟ್ ಗೆ ಬನ್ನಿ ಎಂದು ಟ್ವೀಟ್ ಮಾಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ನಡೆಯಬಹುದು ಎನ್ನುವ ಊಹೆಯ ಮೇರೆಗೆ ಕೇರಳ ಪ್ರವಾಸೋದ್ಯಮ ಇಲಾಖೆ ಫಲಿತಾಂಶ ಪ್ರಕಟವಾದ ಮೇ 15 ರ ಸಂಜೆ 5.48ಕ್ಕೆ ಟ್ವೀಟ್ ಮಾಡಿತ್ತು. ಕೇರಳ ಪ್ರವಾಸೋದ್ಯಮದ ಪೋಸ್ಟ್ ಅನ್ನು ಸಚಿವ ಸುರೇಂದ್ರನ್ ಶೇರ್ ಮಾಡಿದ್ದರು ಆದ್ರೆ ಬಳಿಕ ಇಲಾಖೆ ಆಫರ್ ನೀಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
ಈ ಟ್ವೀಟ್ಗೆ ಹಲವಾರು ಕಮೆಂಟ್ ಗಳು ಬಂದಿತ್ತು. ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದು ಹೇಗೆ ಎನ್ನುವುದು ಕೇರಳವನ್ನು ನೋಡಿ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಬೆಸ್ಟ್ ಎಡ್ಮಿನ್ ಈ ರೀತಿ ಟ್ರೋಲ್ ಮಾಡಿದ್ದನ್ನು ಇದೂವರೆಗೂ ನಾವು ನೋಡಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ರಾಜ್ಯಪಾಲ ವಜುಬಾಯಿವಾಲ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿ 15 ದಿನಗಳ ಕಾಲಾವಕಾಶ ನೀಡಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕ ರಕ್ಷಣೆಗೆ ರೆಸಾರ್ಟ್ ಗಳ ಮೇರೆ ಹೋಗಲು ನಿರ್ಧರಿಸಿದ್ದಾರೆ. ಕೇರಳ ಅಲೆಪ್ಪಿಯಲ್ಲಿರುವ ರೆಸಾರ್ಟ್ ಒಂದರಲ್ಲಿ ಕರ್ನಾಟಕದ ಶಾಸಕರಿಗಾಗಿ 120 ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.