ಬೆಳಗಾವಿ: ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮತ್ತು ರೈತ ಮಹಿಳೆ ಜಯಶ್ರೀ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿರುವ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ನಡೆದಿದೆ.
ಕೊಡಿಹಳ್ಳಿ ಚಂದ್ರಶೇಖರ ಅವರ ವಿರುದ್ಧ ಜಯಶ್ರೀ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಂಘದ ಅಧ್ಯಕ್ಷ ಸತ್ಯಪ್ಪಾ ಅವರು ಏಕವಚನದಲ್ಲಿ ಜಯಶ್ರೀ ಅವರ ಕುರಿತು ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯಶ್ರೀ ಅವರು ನನ್ನ ಬಗ್ಗೆ ಮಾತನಾಡ ಬೇಡ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ ಸರಿ ಇರುವುದಿಲ್ಲ. ನಿನ್ನ ಹಿಂದೆ ಎಷ್ಟು ಜನ ಬರುತ್ತಾರೆ ಎಂದು ಏಕವಚನದಲ್ಲೇ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.
ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಮುಂದಾಳತ್ವದಲ್ಲಿ ಇಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಘಟನೆ ನಡೆದಿದ್ದು, ಇಬ್ಬರ ಜಗಳವನ್ನು ಕಂಡ ಸಂಘದ ಇತರೇ ಸದಸ್ಯರು ಜಗಳ ಬಿಡಿಸಿದ್ದಾರೆ. ಬಳಿಕ ಸ್ಥಳದಿಂದ ರೈತ ಮಹಿಳೆ ಜಯಶ್ರೀ ತೆರಳಿದ್ದಾರೆ.
ಬೆಳಗಾವಿ ಅಧಿವೇಶನಕ್ಕೂ ಮುನ್ನ ಜಿಲ್ಲಾ ರೈತ ಸಂಘದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆ ಬಳಿಕ ಸಂಘ ಎರಡು ಬಣಗಳಾಗಿ ವಿಭಜನೆ ಆಗಿದೆ ಎನ್ನಲಾಗಿದೆ. ಅಧಿವೇಶನಕ್ಕೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ ಸಂಘದಲ್ಲಿ ಉಂಟಾದ ಬಿರುಕಿನಿಂದ ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದು ಉಂಟಾದ ಅಸಮಾಧಾನವೇ ಇಂದು ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv