-900ಕ್ಕೂ ಅಧಿಕ ಭಕ್ತರು ಪೂಜೆಯಲ್ಲಿ ಭಾಗಿ
ಮಡಿಕೇರಿ: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮಂಜಿನ ನಗರಿ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ, ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆ ನೆರವೇರಿಸಲಾಯಿತು.
ಗುರುವಾರ ಸೂರ್ಯಗ್ರಹಣದ ಮೊದಲೇ ದೇವಸ್ಥಾನಗಳು ಬಾಗಿಲು ಹಾಕಿ, ಸಂಜೆ ದೇವಾಲಯಗಳಲ್ಲಿ ಶುದ್ಧ ಕಾರ್ಯಗಳು ನೆರವೇರಿದವು. ಆದರೆ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಿಲ್ಲ. ಇಂದು ಬೆಳಗ್ಗೆ ಪೂಜಾ ವಿಧಿ-ವಿಧಾನಗಳಿಗೆ ದೇವಾಲಯದಲ್ಲಿ ಅನುವು ಮಾಡಿಕೊಡಲಾಗಿದೆ.
ಬೆಳಗ್ಗೆಯಿಂದಲೂ ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸುತ್ತಿದ್ದು, ಗ್ರಹಣ ಹೋಮದಲ್ಲಿ ಭಾಗಿಯಾಗುತ್ತಿದ್ದಾರೆ. ಸುಮಾರು 900ಕ್ಕೂ ಅಧಿಕ ಭಕ್ತರು ಗ್ರಹಣ ಶಾಂತಿ ಪೂಜೆ ಮಾಡಿಸುತ್ತಿದ್ದಾರೆ. ದೇವಾಲಯದ ಪ್ರಧಾನ ಅರ್ಚಕರಾದ ಪ್ರಸನ್ನ ಅವರ ನೇತ್ರತ್ವದಲ್ಲಿ ಗ್ರಹಣ ಹೋಮ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಓಂಕಾರೇಶ್ವರ ದೇವಾಲಯದಲ್ಲಿ ಗ್ರಹಣ ಹೋಮ ನಡೆಯುತ್ತಿದೆ.