ಮಲೆನಾಡು (Malenadu) ಅಂದ್ರೆ ಅದೊಂದು ಸುಂದರವಾದ ಪ್ರಪಂಚ.. ಅದಕ್ಕೆ ಭೂಮಿ ಮೇಲಿನ ಯಾವ ಸ್ಥಳ ಕೂಡ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ..! ಇದು ನಾನಲ್ಲಿಯವನು ಎಂಬ ಕಾರಣಕ್ಕೆ ಹೇಳ್ತಿರೋ ಮಾತಲ್ಲ. ಇಲ್ಲಿನ ಸುಂದರವಾದ ಪ್ರಕೃತಿ, ಬೆಟ್ಟ ಗುಡ್ಡ, ಜನ ಜೀವನ, ವಿಶೇಷ ಸಂಸ್ಕೃತಿ, ಅಡುಗೆ ಹೀಗೆ ನಾನಾ ರೀತಿಯ ವೈವಿದ್ಯತೆ ಹೊಸ ಜಗತ್ತನ್ನೇ ತನ್ನೊಳಗೆ ಸೃಷ್ಟಿಸಿಕೊಂಡಿದೆ.
ಈ ನೆಲದಲ್ಲಿ ಒಂದು ಸುವಾಸನೆಯ ಕಂಪಿದೆ.. ಇಲ್ಲಿನ ಗಾಳಿಯಲ್ಲಿ ಹಾಗೇ ತೇಲಿ ಬರುವ ಸಪ್ತಸ್ವರಗಳಿವೆ… ಇದನ್ನೆಲ್ಲ ಇಂದಿಗೂ ಇಲ್ಲಿನ ಪ್ರಕೃತಿ ಕಾಪಾಡಿಕೊಂಡು ಬಂದಿದೆ. ಇದನ್ನೆಲ್ಲ ನೀವು ಅನುಭವಿಸೋಕೆ ಮಲೆನಾಡಿನ ಕಾಡುಗಳನ್ನು ಸುತ್ತಬೇಕು. ಇಲ್ಲಿ ಟ್ರಿಪ್ ಮಾಡ್ಬೇಕು.. ಅಂದ್ರೆ ಸದಾ ಗಿಜಿಗುಡುವ ಜಾಗ ಬಿಟ್ಟು ಬರಬೇಕು! ಇಲ್ಲೂ ಅಷ್ಟೇ ತುಂಬಿ ತುಳುಕುವ ತಾಣಗಳನ್ನು ಬಿಟ್ಟು, ರಸ್ತೆಯೇ ಇಲ್ಲದ ರಸ್ತೆಯಲ್ಲಿ ಸಾಗಬೇಕು! ಒಂದು ಟ್ರಿಪ್ ಅಲ್ಲದ ಟ್ರಿಪ್ ಮಾಡ್ಬೇಕು!
ಹೌದು, ನಾನು ಕಳೆದ ವಾರನೇ ಹೇಳಿದ್ದೆ ಇಲ್ಲಿನ ಮಳೆಗಾಲದಲ್ಲಿ ನಾನಾ ಜಲಪಾತಗಳು ಹುಟ್ಟಿಕೊಳ್ತವೆ.. ಮಳೆ ಮುಗಿದ ತಕ್ಷಣ ಅವೆಲ್ಲ ಹಾಗೇ ಮತ್ತೆ ಮೌನವಾಗಿ… ಇಲ್ಲದಂತೆ ಸಾಗರದಲ್ಲಿ ಕರಗಿ ಕಳೆದು ಹೋಗುತ್ತವೆ. ಅಂತಹ ಸಾವಿರ ಸಾವಿರ ಜಾಗಗಳು ನಮ್ಮ ಪಶ್ಚಿಮಘಟ್ಟಗಳಲ್ಲಿ ಇವೆ. ಸುಮ್ಮನೆ ಹಾಗೇ ಶರಾವತಿಯ ಹಿನ್ನೀರಿನ ಜಗತ್ತು ಹೊನ್ನೆಮರಡಿನ ಆ ಕಾಡುಗಳನ್ನು ಸುಮ್ಮನೆ ಮೌನವಾಗಿ ಸುತ್ತುವಾಗ ನನಗೆ ಇಂತಹ ಪ್ರಪಂಚದ ಅನುಭವವಾಗಿದ್ದು. ಇವತ್ತು ಅಲ್ಲಿ ಜೋರು ಮಳೆಯಾಗ್ತಿದೆ… ಸುಮ್ಮನೆ ಒಂದು ಗಟ್ಟಿಮುಟ್ಟಾದ ರೈನ್ಕೋಟನ್ನು ಹಾಕಿ ಹೊರಟರೆ ಅಲ್ಲಿನ ಕಾಡುಗಳ ಗೂಗಲ್ ಮ್ಯಾಪ್ನಲ್ಲಿ ಸಿಕ್ಕದ ದಾರಿಗಳಲ್ಲಿ ಓಡಾಡಿದರೆ ಆ ಅನುಭವ ಖಂಡಿತ ಸಿಗುತ್ತೆ! ಇದನ್ನೂ ಓದಿ: ಮಲೆನಾಡಿನ ಮಳೆಗಾಲದ ಗೆಳೆಯರು!
ನನಗಿನ್ನೂ ನೆನಪಿದೆ.. ಅಂತಹ ಬಿಸಿಲಲ್ಲೂ ಸದಾ ನೆರಳು.. ರಾತ್ರಿಯ ಅನುಭವ ಕೊಡುವ ಕಾಡು.. ಇಂತಹ ಕಾಡು, ಮಳೆಯನ್ನೆ ಅಲ್ವಾ ಕುವೆಂಪು ವರ್ಣಿಸಿದ್ದು, ಇಂತಹ ಸ್ವರ್ಗದಲ್ಲೇ ಅಲ್ವಾ ತೇಜಸ್ವಿ ಸುತ್ತಾಡಿದ್ದು. ಹೌದು ಇಂತಹದೇ ಕಾಡು! ತೇಜಸ್ವಿ ʻಕಿವಿʼಯನ್ನು ಕರೆದುಕೊಂಡು ಹೋಗುತ್ತಿದ್ದಿದ್ದು ಇದೇ ಬಗೆಯ ಕಾಡುಗಳಲ್ಲೇ. ಮಳೆಗಾಲದಲ್ಲಿ ಹುಟ್ಟಿ ಆಗಿಹೋಗುವ ಜಲಪಾತಗಳು ಮಾತ್ರ ಅಲ್ಲಿಲ್ಲ.. ಎಂದೂ ಬತ್ತದ ಹೆಸರಿಲ್ಲದ ಶರಾವತಿಗೆ ಉಸಿರು ಕೊಡುವ ಝರಿಗಳು ಅಲ್ಲಿವೆ. ಅವ್ಯಾವುದಕ್ಕೂ ಹೆಸರಿಲ್ಲ. ಮ್ಯಾಪ್ನಲ್ಲಿ ಗುರುತಿಸಿಕೊಳ್ಳುವ ಹಂಬಲವೂ ಅವುಗಳಿಗಿಲ್ಲ. ಅವುಗಳನ್ನು ನಾವಾಗಿಯೇ ಹುಡುಕಿ ಹೊರಟಾಗ ಕಣ್ಣಿಗೆ ಬೀಳುತ್ತವೆ ಅಷ್ಟೇ!
ಹೊನ್ನೆಮರಡು (Honnemaradu), ಹಂಸಗಾರು (Hamsagaru) ಘಟ್ಟದ ಕಾಡುಗಳಲ್ಲಿ ಇಂತಹ ಲೆಕ್ಕವಿಲ್ಲದಷ್ಟು ಝರಿಗಳಿವೆ. ಅದೆಷ್ಟೋ ಶತಮಾನಗಳ ದೈತ್ಯ ಮರಗಳಿವೆ.. ಅದೆಷ್ಟೋ ನಮಗೆ ನಿಮಗೆ ಪರಿಚಯವಿಲ್ಲದ ಹಕ್ಕಿ, ಬಳ್ಳಿ ಮರಗಳಿವೆ..! ಅವುಗಳನ್ನು ನೋಡುವ ಒಂದು ಟ್ರಿಪ್ ಮಾಡೋದಾದ್ರೆ ಸಾಗರದ ಹೊನ್ನೆಮರಡು ಅಥವಾ ಹಂಸಗಾರಿನ ಘಟ್ಟಕ್ಕೆ ಹೋಗಬೇಕು. ಸಾಗರದಿಂದ ಎರಡೂ ಪ್ರದೇಶಗಳು ಜೋಗ ಮಾರ್ಗದಲ್ಲಿ ಸಿಗುತ್ತವೆ. ಈ ಘಟ್ಟ ಪ್ರದೇಶಕ್ಕೆ ಹೋಗುವುದಾದರೆ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ಅಲ್ಲದೇ ಸ್ಥಳೀಯರ ಸಹಾಯ ಬೇಕಾಗುತ್ತದೆ. ಇಲ್ಲವಾದರೆ, ಹೋಗಲು ಸಿಕ್ಕ ದಾರಿ ವಾಪಸ್ ಸಿಗೋದು ಕಷ್ಟ!
ಇದೇ ಟೈಮ್ನಲ್ಲೇ ಅಲ್ಲಿ ಇನ್ನೊಂಥರ ಅತಿಥಿಗಳ ಕಾಟ! ನೀವೆಲ್ಲ ನೋಡಿರ್ತಿರಿ.. ಜಿಗಳೆಗಳು.. ಅದೇ ಜಾತಿಯ ಉಂಬಳ ಎಂದು ಕರೆಯುವ ರಕ್ತ ಹೀರುವ ಜೀವಿಗಳ ಕಾಟ! ಅವು ಕಚ್ಚಿದ್ದೇ ಗೊತ್ತಾಗಲ್ಲ.. ಹೊಟ್ಟೆ ತುಂಬಾ ರಕ್ತ ಹೀರಿ ಬಾಯಿಬಿಟ್ಟ ಮೇಲೆ ವಿಪರೀತ ತುರಿಕೆ..! ಅವುಗಳನ್ನು ಅವಾಯ್ಡ್ ಮಾಡೋದು ಸ್ವಲ್ಪ ಕಷ್ಟ.. ಆದ್ರೆ ಡೆಟಾಲ್… ಸ್ಥಳೀಯರು ಬಳಸುವ ಹೊಗೆಸೊಪ್ಪು, ಸುಣ್ಣದಿಂದ ಕಚ್ಚದಂತೆ ಅಥವಾ ಕಚ್ಚಿ ಹಿಡಿದಿದ್ದನ್ನು ತೆಗೆದು ಹಾಕಲು ಬಳಸ್ಕೋಬಹುದು!
ಈ ಭಾಗಗಳಲ್ಲಿ ನಿಮಗೆ ನಾನು ಕಳೆದ ವಾರ ಹೇಳಿದ ಎಲ್ಲಾ ಅತಿಥಿಗಳು ಸಿಗ್ತಾರೆ… ಕಳಲೆ, ನೂರಾರು ಬಗೆಯ ಅಣಬೆಗಳು (ಅದರಲ್ಲಿ ಕೆಲವಷ್ಟೇ ತಿನ್ನಲು ಯೋಗ್ಯವಾದದ್ದು), ಏಡಿ, ಸೀತಾಳೆಯಂತಹ ನೂರಾರು ಬಗೆಯ ಹೂಗಳು, ವಿವಿಧ ಜಾತಿಯ ಜೇನುನೊಣಗಳ ಗೂಡುಗಳು ಕಾಣಸಿಗುತ್ತವೆ.
ಬಿದಿರಿನದ್ದೆ ಒಂದಷ್ಟು ರಾಶಿ ಗಿಡಗಳು ಬೆಳೆದಿರುವ ಜಾಗಗಳಲ್ಲಿ ಕಳಲೆಗಳು, ಕೆಲವೆಡೆ ಕಾಡುಪ್ರಾಣಿಗಳು ಅವುಗಳನ್ನು ಅಲ್ಲಲ್ಲಿ ತಿಂದು ಹಾಕಿರುತ್ತವೆ. ಇನ್ನೂ ಕೆಲವೆಡೆ ಸ್ಥಳೀಯರು ತೆಗೆದಿರುತ್ತಾರೆ. ಆದರೆ ಬಿದಿರಿನ ಸಂತತಿ ಮುಂದುವರೆಯಲಿ ಅಂತ ಒಂದೆರಡನ್ನ ಹಾಗೇ ಉಳಿಸಿರುತ್ತಾರೆ. ಅವು ಎರಡು ಮೂರು ದಿನಕ್ಕೆ ಬೆಳೆದು ದೊಟ್ಟ ಬಿದಿರಿನ ಮೇಳೆಯಂತೆ ಕಾಣುತ್ತವೆ! ಇನ್ನೂ ಅದೇ ಜಾಗದ ತೋಟಗಳಿಗೆ, ಕೆರೆಗಳ ಜಾಗಗಳಿಗಿಳಿದರೆ ಏಡಿ, ಮೀನುಗಳು ಕಣ್ಣಿಗೆ ಬೀಳುತ್ತವೆ. ಈಗೆಲ್ಲ ಅವುಗಳನ್ನು ಹಿಡಿಯುವ ಕ್ರೇಜ್ ಜನರಿಗೆ ಕಡಿಮೆ ಆಗಿದೆ. ಆದ್ರೆ ನೋಡೋಕಂತು ಸಿಕ್ಕೇ ಸಿಗ್ತವೇ!
ಇನ್ನೂ ಅಣಬೆಗಳು ತಿನ್ನಲು ಯೋಗ್ಯವಾದಂತಹವು, ಹೆಗ್ಗಾಲಣಬೆ, ನುಚ್ಚಣಬೆ, ಎಣ್ಣೆ ಅಣಬೆ ಹೀಗೆ ಅವೆಲ್ಲ ಕೆಲವು ಫಲವತ್ತಾದ ಜಾಗಗಳಲ್ಲಿ ತಲೆ ಎತ್ತಿರುತ್ತವೆ. ಇನ್ನೂ ಕೆಲವರು ಸಿಡಿಲು ಬಡಿದ ಜಾಗಗಳಲ್ಲಿ, ಮಳೆ ಬಂದು.. ಒಂದೆರಡು ಬಿಸಿಲು ಬಿಟ್ಟರೆ ಹುಟ್ಟಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಇನ್ನೂ ಕಾಡಿನ ಜಾತಿಯ ಅಣಬೆಗಳು ಊರಲ್ಲೂ ನೋಡಲು ಸಿಕ್ತವೇ! ಕೆಲವು ಜಾತಿಯವೂ ನೆಲದಲ್ಲಿ, ಇನ್ನೂ ಕೆಲವು ಮರಗಳ ಮೇಲೆ ಹಾಗೆ ಹುಟ್ಟಿಕೊಂಡಿರುತ್ತವೆ. ನೂರಾರು ಬಣ್ಣದ ಬಗೆ ಬಗೆಯ ಅಣಬೆಗಳು ಅಲ್ಲೆಲ್ಲ ಸಿಗ್ತವೆ… ಅವಕ್ಕೆಲ್ಲ ವಿಜ್ಞಾನಿಗಳು ಹೆಸರಿಟ್ಟಿದ್ದಾರೆ… ನಮ್ಮ ಹಳ್ಳಿ ಜನ ಎಲ್ಲಾ ಅಣಬೆಗೂ ಸೇರಿಸಿ.. ಕಾಡಣಬೆ ಅಂತ ಒಂದೇ ಪದದಲ್ಲಿ ಕರೆದು ಬಿಡ್ತಾರೆ..!
ಹೊನ್ನೆಮರಡಿಗೆ ಹೋಗೋದು ಹೇಗೆ?
ಹೊನ್ನೆಮರಡು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರು ಸುತ್ತುವರೆದಿರುವ ಒಂದು ಪುಟ್ಟ ಗ್ರಾಮ. ಈ ಸಾಹಸಮಯ ತಾಣ ಸಾಗರದಿಂದ 28 ಕಿ.ಮೀ ದೂರವಿದೆ. ಜೋಗ ಹೋಗುವ ಮಾರ್ಗದಲ್ಲಿ ಸಿಗುವ ಚೂರಿಕಟ್ಟೆಯಂದ ಎಡಕ್ಕೆ ತಿರುಗಿ ಒಂದು ಕಿ.ಮೀ ಪ್ರಯಾಣದ ಬಳಿಕ ಮುಖ್ಯರಸ್ತೆಯಿಂದ ಎಡಕ್ಕೆ ಸಿಗುವ ದಾರಿಗೆ ಇಳಿದರೆ, ಸುಮಾರು 10 ಕಿ.ಮೀ ಪ್ರಯಾಣದ ಬಳಿಕ ಈ ಊರು ಸಿಗುತ್ತದೆ.
– ಗೋಪಾಲಕೃಷ್ಣ