ಸೀತಾ ಮಾತೆಯ ಊರಿಗೂ ಅಯೋಧ್ಯೆಯಿಂದ ವಿಶೇಷ ರೈಲು!

Public TV
2 Min Read
Amrit Bharat

– ಕೇಂದ್ರ ಸರ್ಕಾರದಿಂದ ಅಮೃತ ಭಾರತ ವಿಶೇಷ ರೈಲು ಗಿಫ್ಟ್

ಅಯೋಧ್ಯೆ: ರಾಮನ ಭಕ್ತರನ್ನು ಖುಷಿ ಪಡಿಸಲು ತನ್ನ ಕೈಯಲ್ಲಿ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ. ರಾಮಮಂದಿರ (Ayodhya Ram Mandir) ಉದ್ಘಾಟನೆ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ವಿಶೇಷ ಅಮೃತ ಭಾರತ ರೈಲು ಓಡಿಸಲು ನಿರ್ಧರಿಸಿದೆ. ಇದರ ಜೊತೆಗೆ ಅಯೋಧ್ಯೆಗೆ ವಂದೇ ಭಾರತ್ (Vande Bharat) ರೈಲು ಕೂಡಾ ಓಡಾಟ ನಡೆಸಲಿದೆ.

ಇನ್ನೂ ವಿಶೇಷ ಎಂದರೆ ಶ್ರೀರಾಮ ದೇವರ ಪತ್ನಿ ಸೀತಾಮಾತೆಯ ಊರಿನ ಮೂಲಕ ಅಯೋಧ್ಯೆಗೆ ಈ ರೈಲು ಓಡಲಿದೆ. ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಈ ವಿಶೇಷ ಅಮೃತ ಭಾರತ ರೈಲಿನ ಸಂಚಾರ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

Ram Mandir

ಈ ರೈಲು ಶ್ರೀರಾಮ ಜನ್ಮಸ್ಥಾನ ಅಯೋಧ್ಯೆಯಿಂದ ಸೀತಾಮರ್ಹಿ (ಸೀತಾ ಮಾತೆಯ ಜನ್ಮಸ್ಥಳ) ಮೂಲಕ ದರ್ಭಂಗಾ ತಲುಪಲಿದೆ. ನಾನ್ ಎಸಿ ಹಾಗೂ ಸ್ಲೀಪರ್ ಕ್ಲಾಸ್ ಸೀಟುಗಳ ಸೇವೆ ಈ ರೈಲಿನಲ್ಲಿರಲಿದೆ. ಡಿಸೆಂಬರ್ 30 ರಂದು ಈ ಅಮೃತಭಾರತ್ ರೈಲಿನ ಜೊತೆ ವಂದೇಭಾರತ್ ರೈಲಿಗೆ ಕೂಡಾ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಿದ್ಧತೆಗಳು ಭಾರೀ ಜೋರಾಗಿ ಮುಂದುವರೆಯುತ್ತಿದೆ. ಮೂಲಸೌಕರ್ಯ ಕಲ್ಪಿಸುವಲ್ಲಿ ಯಾವುದೇ ಸಮಸ್ಯೆಯಾಗದಂತೆ ಉತ್ತರ ಪ್ರದೇಶ ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಅಯೋಧ್ಯೆಯ ರೈಲು ನಿಲ್ದಾಣ ನಿರ್ಮಾಣಕ್ಕೆ 240 ಕೋಟಿ ರೂಪಾಯಿ ಖರ್ಚಾಗಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಈ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

ವಿಮಾನಯಾನ ಸೇವೆಗೂ ಚಾಲನೆ!: ಡಿಸೆಂಬರ್ 30ರಂದೇ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯೂ ನಡೆಯಲಿದೆ. ಇಂಡಿಗೋ ವಿಮಾನ ಮೊದಲ ಹಂತದಲ್ಲಿ ದೆಹಲಿ ಹಾಗೂ ಅಹಮದಾಬಾದ್‌ಗೆ ಹಾರಾಟ ನಡೆಸಲಿದೆ. 1 ಗಂಟೆ 20 ನಿಮಿಷದಲ್ಲಿ ಈ ವಿಮಾನ ದೆಹಲಿಯಿಂದ ಅಯೋಧ್ಯೆಗೆ ತಲುಪಲಿದೆ.

ಡಿಸೆಂಬರ್ 22ರಂದು ವಿಮಾನ ನಿಲ್ದಾಣದಲ್ಲಿ ಟ್ರಯಲ್ ರನ್ ನಡೆದಿತ್ತು. ಇದನ್ನೂ ಓದಿ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

Share This Article