ಬೆಂಗಳೂರು: ಸಿಎಂ ಯಡಿಯೂರಪ್ಪನವರು ಬಹುಮತ ಸಾಬೀತು ಮತ್ತು ಧನ ವಿಧೇಯಕ ಅಂಗೀಕಾರವಾದ ಕೂಡಲೇ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಸ್ಪೀಕರ್ ಸ್ಥಾನದ ರೇಸ್ನಲ್ಲಿ ಮೂವರು ಮುಂಚೂಣಿಯಲ್ಲಿದ್ದು, ನೂತನ ಸ್ಪೀಕರ್ ಆಯ್ಕೆ ಸಂಬಂಧ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಶಾಸಕರಾದ ರಾಜಾಜಿನಗರ ಶಾಸಕರಾದ ಸುರೇಶ್ಕುಮಾರ್, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿರಾಜಪೇಟೆ ಶಾಸಕ ಮಾಜಿ ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯ ಮೂವರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಆದರೆ ಹೈಕಮಾಂಡ್ ಜೊತೆ ಚರ್ಚೆ ಬಳಿಕವಷ್ಟೇ ಸ್ಪೀಕರ್ ಆಯ್ಕೆ ಅಂತಿಮವಾಗಲಿದೆ.
ಒಂದು ವೇಳೆ ಜಗದೀಶ್ ಶೆಟ್ಟರು ಒಪ್ಪಿದರೆ ಅವರು ಹೆಸರು ಕೇಳಿ ಬರುವ ಸಾಧ್ಯತೆ ಇದೆ. ಆದರೆ ಈ ಎಲ್ಲ ಮಾಹಿತಿಯನ್ನು ಹೈಕಮಾಂಡ್ಗೆ ತಿಳಿಸಿಲ್ಲ. ಕೇವಲ ಬಿಜೆಪಿ ವಲಯದಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಮಂಗಳವಾರ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೋಗುವ ಸಾಧ್ಯತೆ ಇದೆ. ಅಲ್ಲಿ ನಾಯಕರ ಜೊತೆ ಚರ್ಚೆ ಮಾಡಿ ಮೂರು-ನಾಲ್ಕು ದಿನಗಳಲ್ಲಿ ಅಂತಿಮವಾಗುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತಯಾಚನೆ ಮಾಡಿದ ಬಳಿಕ ಧನವಿನಿಯೋಗ ಮತ್ತು ಪೂರಕ ಬಜೆಟ್ಗೆ ಸದನ ಧ್ವನಿ ಮತದ ಮೂಲಕ ಅಂಗೀಕಾರ ನೀಡಿತು. ಇದಾದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು.