ಬೆಂಗಳೂರು: ರಾಜಭವನದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿ ಅವರಿಗೆ ಖಾರವಾಗಿ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರದಲ್ಲಿ ಅಸಮಾಧಾನ ಹೊರ ಹಾಕಿರುವ ಸ್ಪೀಕರ್, ರಾಜ್ಯ ಮುಖ್ಯ ಕಾರ್ಯದರ್ಶಿಗಳಾದ ನಿಮ್ಮ ಆಹ್ವಾನದ ಮೇಲೆ ಸಚಿವ ಸಂಪುಟ ಸಚಿವರ ಪ್ರಮಾಣ ವಚನ ಹಾಗೂ ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಆಗಮಿಸಿದ್ದೆ. ಆದರೆ ಈ ವೇಳೆ ರಾಜಭವನದ ಮುಂದೆ ಅರ್ಧ ಗಂಟೆ ಕಾದಿದ್ದು, ಅಸಹಾಯಕನಾಗಿ ಹಿಂದಿರುತ್ತೇನೆ, ಈ ಪರಿಸ್ಥಿತಿಗೆ ಯಾರು ಕಾರಣ ಎಂಬುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ: ಮಾನ್ಯ ಮುಖ್ಯ ಮಂತ್ರಿಗಳು, ಉಪ ಮುಖ್ಯಮಂತಿಗಳು, ವಿಧಾನಸಭಾ ಪರಿಷತ್ ಸಭಾಪತಿಗಳ ಹೊರತಾಗಿ ಮತ್ತೊಂದು ಸಾಂವಿಧಾನಿಕ ಸ್ಥಾನ ವಿಧಾನಸಭಾಧ್ಯಕ್ಷರದ್ದು ಮಾತ್ರ. ಮುಖ್ಯ ಮಂತ್ರಿಗಳು ಹಾಗೂ ಸಭಾಪತಿಗಳಿಗೆ ಒಂದು ಗೌರವಯುತ ವ್ಯವಸ್ಥೆ ಮಾಡುವುದು ಜವಾಬ್ದಾರಿಯಾಗಿರುತ್ತದೆ. ನಿಮ್ಮ ಅಧಿಕಾರಿಗಳ ದುರಹಂಕಾರ, ಅಜ್ಞಾನ ಹಾಗೂ ರಾಜಭವನದ ಒಳಗಿರತಕ್ಕಂತಹ ಅಧಿಕಾರಿಗಳ ದುರಂಹಾರ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಜಭವನದ ಒಳಗೂ ಹಾಗೂ ಹೊರಗೂ ತುಂಬಿದ್ದಂತಹ ವಾಹನಗಳು ಯಾರದ್ದು ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್, ಯಾರು ಅವರಿಗೆ ಅನುಮತಿ ನೀಡಿದರು ಹಾಗೂ ಸಾರ್ವಜನಿಕ ಜೀವನದಲ್ಲಿ ಇವರ ಸ್ಥಾನಮಾನ ಏನೆಂದು ತಿಳಿದುಕೊಳ್ಳಲು ಕುತೂಹಲನಾಗಿದ್ದೇನೆ. ಈ ಅಪರಾಧಕ್ಕೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.