ಕೋಲಾರ: ಬರೀ ನಾಲ್ಕು ಮಂದಿ ಅಲ್ಲ 40 ಮಂದಿ ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ ಮತ್ತು ಬುಧವಾರ ನಡೆದ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಗೈರಾದ ಶಾಸಕರು ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎಂದಿನಂತೆ ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶನ ಮೂರ್ತಿ ಹಾಗೂ ಪುಷ್ಕರಣಿಯನ್ನು ರಮೇಶ್ ಕುಮಾರ್ ಅವರು ಉದ್ಘಾಟಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಶಾಸಕರು ರಾಜೀನಾಮೆ ನೀಡುವ ವಿಚಾರ ನನಗೇನು ಗೊತ್ತಿಲ್ಲ. ಅಧಿವೇಶನದಲ್ಲಿ ಗೈರಾದ ಶಾಸಕರ ಮೇಲೆ ಕ್ರಮಕೈಗೊಳ್ಳಲು ನಾನು ಯಾರು? ನಾಲ್ಕು ಅಲ್ಲ ನಲವತ್ತು ಮಂದಿ ಶಾಸಕರು ರಾಜೀನಾಮೆ ನೀಡಿದರೂ ನಾನು ತೆಗೆದುಕೊಳ್ಳಲು ಸಿದ್ಧವೆಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ಸಿನ ಶಾಸಕ ಕಂಪ್ಲಿ ಗಣೇಶ್ ಬಗ್ಗೆ ಪ್ರತಿಕ್ರಿಯಿಸಿ, ಗಣೇಶ್ ಅವರನ್ನು ಬಂಧಿಸುವಂತೆ ಸೂಚನೆ ನೀಡಲು ನಾನು ಪೊಲೀಸ್ ಇಲಾಖೆಯ ಅಧಿಕಾರಿಯೇ? ನನಗೆ ಹೇಗೆ ಗೊತ್ತಿರುತ್ತದೆ ಅವರ ಬಗ್ಗೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಳಿದಾಗ, ಊರಿನ ಜನರೆಲ್ಲ ಚೆನ್ನಾಗಿದ್ದಾರೆ. ಸರಿಯಾಗಿ ಮಳೆ, ಬೆಳೆ ಆದರೆ ಇನ್ನೂ ಚೆನ್ನಾಗಿರುತ್ತದೆ ಎನ್ನುತ್ತ ಪರೋಕ್ಷವಾಗಿ ರಾಜಕೀಯ ಬೆಳವಣಿಗೆ ಕುರಿತು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv