ಕಲಬುರಗಿ: ವಿಧಾನಪರಿಷತ್ ಸಭಾಪತಿ ಹುದ್ದೆಯಿಂದ ನಿರ್ಗಮಿಸುವ ಹಂತದಲ್ಲಿ ಡಿ.ಹೆಚ್ ಶಂಕರ ಮೂರ್ತಿ ವಿವಾದವೊಂದರಲ್ಲಿ ಸಿಲುಕಿದ್ದಾರೆ.
ಭ್ರಷ್ಟಾಚಾರ ಮತ್ತು ನಕಲಿ ಅಂಕಪಟ್ಟಿ ನೀಡಿರೋ ಅನರ್ಹರ ರಕ್ಷಣೆಗೆ ನಿಂತ ಕಳಂಕ ಎದುರಿಸುತ್ತಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಸುಭೋದ್ ಯಾದವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದಾಗ, ಇಲಾಖೆಯಲ್ಲಿ ಹುದ್ದೆ ಪಡೆಯಲು ನಕಲಿ ಅಂಕಪಟ್ಟಿ ಸಲ್ಲಿಸಿದ್ದ 66 ಮಂದಿ ಆಹಾರ ಸುರಕ್ಷತಾ ಅಧಿಕಾರಿಗಳನ್ನ ಅನರ್ಹಗೊಳಿಸಿದ್ದರು.
ಲಂಚ ಪಡೆಯುತ್ತಿದ್ದ 6 ಮಂದಿಯನ್ನು ಅಮಾನತು ಮಾಡಿದ್ದರು. ಇವರ ಪರವಾಗಿ ಶಂಕರಮೂರ್ತಿ ಲಾಬಿ ನಡೆಸಿದ್ದಾರೆ. 2017ರಲ್ಲಿ ಈ ಅಧಿಕಾರಿಗಳ ಪುನಃ ನೇಮಕಾತಿ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಭಾಪತಿ ಡಿ.ಎಚ್ ಶಂಕರಮೂರ್ತಿ ಪತ್ರ ಬರೆದಿದ್ದರು. ಆದ್ರೆ ಇದನ್ನು ಇಲಾಖೆ ಪರಿಗಣಿಸಿರಲಿಲ್ಲ.
ಹೀಗಾಗಿ ಇದೀಗ ಸಭಾಪತಿ ಡಿ.ಎಚ್ ಶಂಕರಮೂರ್ತಿ, ನೂತನ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ 66 ಅನರ್ಹ ಎಫ್ಎಸ್ಓಗಳನ್ನು ಪುನಃ ಅದೇ ಹುದ್ದೆಗಳಿಗೆ ನೇಮಿಸುವಂತೆ ಪತ್ರ ಬರೆದಿದ್ದಾರೆ. ಸಭಾಪತಿ ಒತ್ತಡಕ್ಕೆ ಮಣಿದು ಆರೋಗ್ಯ ಸಚಿವರು ಅನರ್ಹರಿಗೆ ಮಣೆ ಹಾಕ್ತಾರಾ? ಎಂಬುದನ್ನು ಕಾದು ನೋಡ್ಬೇಕು.