ಬೆಂಗಳೂರು: ಜಯನಗರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಶಾಸಕಿ ಸೌಮ್ಯಾರೆಡ್ಡಿಯವರು ತಂದೆಯ ಆಗಮನಕ್ಕಾಗಿ 40 ನಿಮಿಷ ಕಾದು ಕಾದು ಕೊನೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸೋಮವಾರ ಸಂಜೆ 4 ಗಂಟೆಯ ವೇಳೆಗೆ ಸ್ಪೀಕರ್ ಕಚೇರಿಯಲ್ಲಿ ನೂತನ ಶಾಸಕಿ ಸೌಮ್ಯಾರೆಡ್ಡಿಯವರ ಪ್ರಮಾಣ ವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸೌಮ್ಯರೆಡ್ಡಿಯವರು ತಮ್ಮ ತಾಯಿ ಹಾಗೂ ತಮ್ಮನ ಜೊತೆ ಕಚೇರಿಗೆ ಆಗಮಿಸಿದ್ದರು. ಇನ್ನೆನೂ ಕಾರ್ಯಕ್ರಮ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಸೌಮ್ಯಾರೆಡ್ಡಿಯವರು ನಮ್ಮ ತಂದೆ ಬರುವವರೆಗೂ ಸ್ವಲ್ಪ ಹೊತ್ತು ಕಾಯುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿಮಾಡಿಕೊಂಡರು. ಸೌಮ್ಯಾರೆಡ್ಡಿಯವರ ಪಿತೃಪ್ರೇಮವನ್ನು ಕಂಡು ಸ್ಪೀಕರ್ ಕೂಡ ರಾಮಲಿಂಗರೆಡ್ಡಿಯವರಿಗಾಗಿ ಕಾದು ಕುಳಿತರು.
ಸುಮಾರು 40 ನಿಮಿಷಗಳ ಕಾಲ ಕಾದರೂ ರಾಮಲಿಂಗರೆಡ್ಡಿಯವರು ಆಗಮಿಸಲಿಲ್ಲ. ಕೊನೆಗೆ ತಾಯಿ ಮತ್ತು ಸಹೋದರ ಸಮ್ಮುಖದಲ್ಲಿ ಭಗವಂತ ಹಾಗೂ ಸತ್ಯ ನಿಷ್ಠೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ನಂತರ ಮಾತನಾಡಿದ ಸೌಮ್ಯರೆಡ್ಡಿ ಜಯನಗರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದು ಹೇಳಿದರು.