ಕೋಲ್ಕತ್ತಾ: ಸಿಮೀತ ಮಾದರಿಯ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠವಾಗಿರಬೇಕಾದರೆ ತಂಡಕ್ಕೆ ಸ್ಪಿನ್ನರ್ ಗಳಾದ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ರನ್ನು ಆಯ್ಕೆ ಮಾಡಬೇಕಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ಯುವ ಆಟಗಾರರಿಗೆ ಪರೀಕ್ಷೆ ನಡೆಸುವ ಉದ್ದೇಶದಿಂದ ಚಹಲ್ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ತಂಡದ ಬ್ಯಾಟಿಂಗ್ ಲೈನ್ ಬಲಿಷ್ಠ ಪಡಿಸುವ ಉದ್ದೇಶದಿಂದ ಪ್ರಯೋಗಕ್ಕೆ ಮುಂದಾಗಿದೆ. ಆದರೆ ಸಿಮೀತ ಮಾದರಿ ಕ್ರಿಕೆಟಿಗೆ ಚಹಲ್ ಅಗತ್ಯವಿದ್ದು, ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಕುಲ್ದೀಪ್ ಯಾದವ್ ಹಾಗೂ ಚಹಲ್ ತಂಡದಲ್ಲಿರುವುದು ಅಗತ್ಯವಿದೆ ಎಂದಿದ್ದಾರೆ.
ಟಿ20 ಟೂರ್ನಿಯಲ್ಲಿ ತಂಡದ ನಾಯಕರಾಗಿ ಕೊಹ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಆದರೆ ಟೀಂ ಇಂಡಿಯಾಗೆ ಲೆಗ್ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ, ಕೃಣಾಲ್ ಪಾಂಡ್ಯ ಇಬ್ಬರು ಅಗತ್ಯವಿಲ್ಲ. ಇಬ್ಬರಲ್ಲಿ ಒಬ್ಬರಿದ್ದರೆ ಸಾಕು. ಇಬ್ಬರನ್ನು ಒಂದೇ ಪಂದ್ಯದಲ್ಲಿ ಕಣಕ್ಕಿಸುವ ಅಗತ್ಯತೆಯ ಅಂಶವನ್ನು ಆಯ್ಕೆ ಸಮಿತಿ ಗಮನಿಸಬೇಕಿದೆ ಎಂದು ಸೌರವ್ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.