ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ಕಾರು ಅಪಘಾತಕ್ಕೀಡಾದ (Accident) ಘಟನೆ ಗುರುವಾರ ಪಶ್ಚಿಮ ಬಂಗಾಳದಲ್ಲಿ (West Bengal) ದುರ್ಗಾಪುರ ಎಕ್ಸ್ಪ್ರೆಸ್ವೇಯಲ್ಲಿ ನಡೆದಿದೆ.
ಗಂಗೂಲಿ ಬರ್ಧಮಾನ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಗೂಲಿ ಅವರ ರೇಂಜ್ ರೋವರ್ ಕಾರು ಸಾಮಾನ್ಯ ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ಲಾರಿಯೊಂದು ಇದ್ದಕ್ಕಿದ್ದಂತೆ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಡೈವ್ ಮಾಡೋ ರೀಲ್ಸ್ ಹುಚ್ಚಿಗೆ ವೈದ್ಯೆ ಬಲಿ – ತುಂಗಭದ್ರಾ ನದಿಪಾಲಾಗಿದ್ದ ಯುವತಿಯ ಶವ ಪತ್ತೆ
ಈ ಸಂದರ್ಭದಲ್ಲಿ ಗಂಗೂಲಿ ಅವರ ಕಾರು ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಗಂಗೂಲಿ ಅವರ ಕಾರಿನ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಒಂದು ಬೆಂಗಾವಲು ವಾಹನ ಗಂಗೂಲಿ ಅವರ ಕಾರಿಗೆ ಡಿಕ್ಕಿಯಾಗಿದೆ.
ಅದೃಷ್ಟವಶಾತ್ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸದ ಕಾರಣ ಗಂಗೂಲಿ ಪ್ರಾಣಾಪಾಯದಿಂದ ಪಾರಾಗಿದ್ದು ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಅಪಘಾತದ ನಂತರ ಸೌರವ್ ಸುಮಾರು 10 ನಿಮಿಷಗಳ ಕಾಲ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ತನ್ನ ಪ್ರಯಾಣವನ್ನು ಪುನರಾರಂಭಿಸಿದರು. ಇದನ್ನೂ ಓದಿ: 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ಬೈ ಹೇಳಿದ ಚಹಲ್, ಧನಶ್ರೀ – ಮುಂಬೈ ಕೋರ್ಟ್ನಲ್ಲಿ ಏನಾಯ್ತು?
ಬರ್ಧಮಾನ್ ತಲುಪಿದ ನಂತರ ಗಂಗೂಲಿ ಬರ್ಧಮಾನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಬರ್ಧಮಾನ್ ಕ್ರೀಡಾ ಸಂಘ ಆಯೋಜಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.