ಬಿಜೆಪಿ ಸೇರುವ ಬಗ್ಗೆ ಮೌನ ಮುರಿದ ಗಂಗೂಲಿ

Public TV
2 Min Read
collage Sourav Ganguly bjp

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ನಾನು ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎನ್ನುವ ವದಂತಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಗಂಗೂಲಿ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಬಿಸಿಸಿಐ ಅಧ್ಯಕ್ಷರಾಗಲು ಗಂಗೂಲಿಗೆ ಬಿಜೆಪಿ ಪಕ್ಷ ಸಹಾಯ ಮಾಡಿದೆ ಮತ್ತು ಗಂಗೂಲಿಯವರನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಅಸಕ್ತಿ ಹೊಂದಿದೆ ಎಂಬ ವಂದತಿ ಕೇಳಿ ಬಂದಿತ್ತು.

amith shah 1

ಈಗ ಈ ವಂದತಿಗಳಿಗೆ ತೆರೆ ಎಳೆದಿರುವ ಸೌರವ್ ಗಂಗೂಲಿ, ನಾನು ಮತ್ತು ಅಮಿತ್ ಶಾ ಅವರು ಭಾನುವಾರ ಮುಂಬೈನಲ್ಲಿ ಭೇಟಿ ಮಾಡಿದ್ದು ನಿಜ. ಆದರೆ ಈ ಭೇಟಿಯಲ್ಲಿ ನಾವು ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತನಾಡಿಲ್ಲ. ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಅಮಿತ್ ಶಾ ಯಾವ ಪ್ರಶ್ನೆಯನ್ನು ಕೇಳಿಲ್ಲ. ಈ ವಿಚಾರದಲ್ಲಿ ನಾವು ಅವರಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ.

ನನ್ನ ಹೆಸರು ರಾಜಕೀಯ ಪಕ್ಷದೊಂದಿಗೆ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಾನು ನಮ್ಮ ರಾಜ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದಾಗಲೂ ನಾನು ಅವರ ಪಕ್ಷಕ್ಕೆ ಸೇರುತ್ತೇನೆ ಎಂದು ಸುದ್ದಿಯಾಗಿತ್ತು. ಆದರೆ ನೀವು ಅದರ ಫಲಿತಾಂಶವನ್ನು ನೋಡಿದ್ದಿರಾ. ನಾನು ಅವರನ್ನು ಭೇಟಿ ಮಾಡಿದೆ ಆದರೆ ಅವರ ಪಕ್ಷ ಸೇರಲಿಲ್ಲ ಎಂದು ತಿಳಿಸಿದರು.

mamata banerjee

ಇದೇ ವೇಳೆ ಅಮಿತ್ ಶಾ ಅವರ ಭೇಟಿಯ ವಿಚಾರವಾಗಿ ಮಾತನಾಡಿದ ಗಂಗೂಲಿ, ಅವರನ್ನು ಭೇಟಿ ಮಾಡಿದ್ದು ವಿಶೇಷ ಮತ್ತು ವಿಭಿನ್ನವಾಗಿತ್ತು. ನಾವು ಈ ಭೇಟಿಯಲ್ಲಿ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ನಾವು ಬಿಸಿಸಿಐಗೆ ಬಗ್ಗೆ ಮಾತನಾಡಿದೆವು ಎಂದು ವಿವರಿಸಿದರು.

ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಸಂಬಂಧ ಮಾತುಕತೆ ನಡೆದಿತ್ತು. ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ, ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿ ಹುದ್ದೆಗೆ ಸ್ಪರ್ಧಿಸಿದ್ದು ಅ.23ಕ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.

bcci

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು 2017ರಲ್ಲಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಆಡಳಿತಾತ್ಮಕ ಸಮಿತಿಯನ್ನು ನೇಮಿಸಿತ್ತು. ಅಕ್ಟೋಬರ್ 23ರಂದು ಬಿಸಿಸಿಐ ಪದಾಧಿಕಾರಿಗಳಿಗೆ ಆಡಳಿತಾತ್ಮಕ ಸಮಿತಿ ಅಧಿಕಾರ ಹಸ್ತಾಂತರ ಮಾಡಲಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *