ನವದೆಹಲಿ: ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತೆರಳಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಕೊನೆಯ ಬಾರಿಗೆ ಯುವಕ ತನ್ನ ಪೋಷಕರಿಗೆ ಸಂದೇಶ ಕಳುಹಿಸಿದ್ದಾನೆ.
ಹರ್ಷ (26) ನಾಪತ್ತೆಯಾಗಿರುವ ಯುವಕನಾಗಿದ್ದು, ಜುಲೈ 1 ರ ಬೆಳಗ್ಗೆ ಈತ ತನ್ನ ಪೋಷಕರೊಂದಗೆ ಮಾತನಾಡಿದ್ದ. ಆದರೆ ಕೆಲ ಸಮಯದ ಬಳಿಕ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿದ್ದ ಎಂದು ಪೋಷಕರು ತಿಳಿಸಿದ್ದಾರೆ.
ವಾಟ್ಸಪ್ ಸಂದೇಶದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಘಟನೆ ನಡೆದ 3 ದಿನಗಳ ಬಳಿಕ ಪೊಲೀಸರು ಮೃತ ದೇಹವನ್ನು ಯಮುನಾ ನದಿಯಲ್ಲಿ ಪತ್ತೆ ಮಾಡಿದ್ದಾರೆ.
ಜೂನ್ 30ರ ರಾತ್ರಿ ಹರ್ಷ ತನ್ನ 6 ಜನರೊಂದಿಗೆ ಗೆಳೆಯನ ಪತ್ನಿಯ ಹುಟ್ಟುಹಬ್ಬ ಪಾರ್ಟಿಗೆ ತೆರಳಿದ್ದ. ಜುಲೈ 1 ರಂದು ಆತನ ಮೊಬೈಲ್ ನಿಂದ ಪೋಷಕರಿಗೆ ಹಾಗೂ ಕೆಲ ಆತ್ಮೀಯರಿಗೆ ವಾಟ್ಸಪ್ ಸಂದೇಶ ಬಂದಿತ್ತು. ಇದರಲ್ಲಿ ‘ಅಪ್ಪ ಅಮ್ಮ ಕ್ಷಮಿಸಿ. ನನ್ನ ಸ್ಕೂಟರ್, ಪರ್ಸ್ ಮತ್ತು ವಸ್ತುಗಳು ಐಟಿಒ ಸೇತುವೆ ಬಳಿ ಸಿಗುತ್ತದೆ. ನನ್ನ ಮೃತದೇಹ ಸೇತುವೆಯ ಕೆಳಗಿರುತ್ತದೆ ತೆಗೆದುಕೊಳ್ಳಿ ಎಂದು ಬರೆಯಲಾಗಿದೆ.
ವಾಟ್ಸಪ್ ಸಂದೇಶದಿಂದ ಆತಂಕಗೊಂಡ ಪೋಷಕರು ಕೂಡಲೇ ದೆಹಲಿಯ ಐಟಿಒ ಸೇತುವೆ ಬಳಿ ಆಗಮಿಸಿದ್ದು, ಸಂದೇಶದಲ್ಲಿ ಇರುವಂತೆ ಆತನ ವಸ್ತುಗಳು ಸೇತುವೆ ಬಳಿ ಪತ್ತೆಯಾಗಿತ್ತು. ಆ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈ ವೇಳೆ ಪೊಲೀಸರು ತಮ್ಮ ದೂರಿನ ಬಗ್ಗೆ ಆಸಕ್ತಿ ವಹಿಸಲಿಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತ ಯುವಕ ಆನ್ಲೈನ್ ಶಾಪಿಂಗ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.