ಬೆಂಗಳೂರು: ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಎಐಸಿಸಿ ಅಧ್ಯಕ್ಷೀಯ ಚುನಾವಣೆ (AICC President Election) ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಿಂದ ಹೊರಟು ಮೈಸೂರು (Mysuru) ವಿಮಾನ ನಿಲ್ದಾಣಕ್ಕೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಮಡಿಕೇರಿ (Madikeri) ತಲುಪಲಿದ್ದಾರೆ. ನಂತರ ರಾಹುಲ್ ಗಾಂಧಿ ಜೊತೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ರಾಹುಲ್, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಚುನಾವಣೆಯ ರಾಜಕೀಯ ಈಗ ದೆಹಲಿಯಿಂದ ಮಡಿಕೇರಿಗೆ ಶಿಫ್ಟ್ ಆಗುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಸ್ಪರ್ಧಿಸಿದ್ದು, ಹೈಕಮಾಂಡ್ ಒಲವು ಮಾತ್ರ ಖರ್ಗೆ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಆ ಕುರಿತ ಮಹತ್ವದ ಚರ್ಚೆ ಮಡಿಕೇರಿಯ ರೆಸಾರ್ಟ್ನಲ್ಲಿ ನಡೆಯಲಿದೆ.
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ದೆಹಲಿಗೆ ಹೋಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರೇ ಮಗನ ಜೊತೆ ಚರ್ಚೆಗೆ ಮಡಿಕೇರಿಗೆ ಬರುತ್ತಿದ್ದಾರೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಕಾರಣ ಎರಡು ದಿನ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಬಿಡುವು ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್ ನಡುವೆ ಫೈಟ್
ಇದೇ ವೇಳೆ ಎಐಸಿಸಿ ಚುನಾವಣೆ ಬಗ್ಗೆ ಚರ್ಚಿಸಲು ಸೋನಿಯಾ ಗಾಂಧಿ ಇಂದು ಮಧ್ಯಾಹ್ನ ಮೈಸೂರಿಗೆ ಬರಲಿದ್ದು, ಇಲ್ಲಿಂದ ಹೆಲಿಕಾಪ್ಟರ್ನಲ್ಲಿ ಮಡಿಕೇರಿಗೆ ತೆರಳಲಿದ್ದಾರೆ. ಸಂಜೆ ವೇಳೆಗೆ ರಾಹುಲ್ ಗಾಂಧಿ ಕೂಡ ಮಡಿಕೇರಿಗೆ ಹೋಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಮಡಿಕೇರಿಗೆ ತೆರಳಲಿದ್ದು ಮಹತ್ವದ ಚರ್ಚೆ ನಡೆಸಲಿದ್ದಾರೆ.