ರಾಮನಗರ: ಕುಟುಂಬದಲ್ಲಿ ಜಮೀನು ವಿಚಾರವಾಗಿ ಉಂಟಾದ ಕಲಹದಲ್ಲಿ ಪುತ್ರನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಶವವನ್ನು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಘಟನೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ.
ನಾಗವಾರ ಗ್ರಾಮದ ನಾಗಮ್ಮ (70) ಕೊಲೆಯಾದ ದುರ್ದೈವಿ. ಸುರೇಶ್ ಹೆತ್ತತಾಯಿಯನ್ನು ಕೊಂದ ಪಾಪಿ ಮಗ. ಕಳೆದ ಮೂರು ದಿನಗಳ ಹಿಂದೆಯೇ ಸುರೇಶ್ ತನ್ನ ತಾಯಿಯನ್ನು ಕೊಲೆ ಮಾಡಿ ಮನೆಯ ಹಿಂದಿನ ಶೌಚಾಲಯದ ಗುಂಡಿಯೊಳಗೆ ಹಾಕಿ ಮುಚ್ಚಿದ್ದಾನೆ.
ಮೃತ ಮಹಿಳೆ ನಾಗಮ್ಮಳ ಹೆಸರಿನಲ್ಲಿ 10 ಗುಂಟೆ ಜಮೀನು ಇದ್ದು, ಅದನ್ನ ತನ್ನ ಹೆಸರಿಗೆ ಬರೆದುಕೊಡುವಂತೆ ಮಗ ಸುರೇಶ್ ಪದೇ ಪದೇ ತಾಯಿಯ ಜೊತೆ ಜಗಳ ಮಾಡುತ್ತಿದ್ದನು. ಆದರೆ ಮೂರು ದಿನಗಳ ಹಿಂದೆ ಕುಡಿದು ಬಂದ ಆರೋಪಿ ಸುರೇಶ್ ಮತ್ತೆ ಜಮೀನು ವಿಚಾರವಾಗಿ ಗಲಾಟೆ ನಡೆಸಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಾಯಿ ನಾಗಮ್ಮರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಶೌಚಾಲಯದ ಗುಂಡಿಯಲ್ಲಿ ಶವವನ್ನ ಮುಚ್ಚಿ ಏನು ತಿಳಿಯದಂತೆ ನಾಟಕವಾಡಿದ್ದಾನೆ.
ಘಟನೆ ಸಂಬಂಧ ಸ್ಥಳಕ್ಕೆ ಎಂಕೆ ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲೂಕು ಅಧಿಕಾರಿಗಳ ಅನುಮತಿ ಪಡೆದು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ತಯಾರಿ ನಡೆಸಿದ್ದಾರೆ.