ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಮೂರ್ತಿ ನಗರ ಸಮೀಪದ ಕಲ್ಕೆರೆ ಗ್ರಾಮದ ನಿವಾಸಿ ನಾರಾಯಣ ಸ್ವಾಮಿ (60) ತನ್ನ ಮಗನಿಂದಲೇ ಭೀಕರವಾಗಿ ಕೊಲೆಯಾಗಿರುವ ದುರ್ದೈವಿ ಅಪ್ಪ. ನಾರಾಯಣ ಸ್ವಾಮಿ ಪತ್ನಿ ಹಾಗು ಮಗ ಮನೋಜ್ ಇಬ್ಬರನ್ನು ಬಿಟ್ಟು ನಗರದ ಕೌದೇನಹಳ್ಳಿಯಲ್ಲಿ ತನ್ನ ಬೇರೊಂದು ಬಿಲ್ಡಿಂಗ್ ನಲ್ಲಿ ವಾಸವಿದ್ದರು.
ನಾರಾಯಣಸ್ವಾಮಿ ಹೆಂಡತಿ ಹಾಗೂ ಮಗನಿಗೆ ಬಾಡಿಗೆ ಹಣವನ್ನು ನೀಡದೆ ಇರುವುದರಿಂದ ಇದೇ ವಿಷಯಕ್ಕೆ ತಂದೆ ಮಗನ ನಡುವೆ ಶನಿವಾರ ರಾತ್ರಿ ಗಲಾಟೆ ಶುರುವಾಗಿದೆ. ಆದರೆ ಜಗಳ ವಿಕೋಪಕ್ಕೆ ತಿರುಗಿ ಮನೋಜ್ ಕೈಗೆ ಸಿಕ್ಕ ಸುತ್ತಿಗೆಯಿಂದ ತಂದೆಯ ತಲೆಗೆ ಜೋರಾಗಿ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ನಾರಾಯಣ ಸ್ವಾಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಆರೋಪಿ ಮನೋಜ್ ಘಟನೆ ಬಳಿಕ ಪರಾರಿಯಾಗಿದ್ದಾನೆ.
ಸದ್ಯಕ್ಕೆ ರಾಮಮೂರ್ತಿನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆಸ್ತಿ ವಿಷಯಕ್ಕಾಗಿ ಅಣ್ಣ ತಮ್ಮಂದಿರು ಕಿತ್ತಾಡಿಕೊಂಡು ಸಾಯುವುದನ್ನು ಹೆಚ್ಚು, ಆದರೆ ಇಲ್ಲಿ ಹೆತ್ತ ಮಗನೇ ತಂದೆಯನ್ನು ಕೊಲೆಗೈದಿರುವುದು ವಿಪರ್ಯಾಸದ ಸಂಗತಿಯಾಗಿದೆ.