ಬೆಂಗಳೂರು: ತಾಯಿಯ ಹೆಸರಿನಲ್ಲಿ ಮಗನೊಬ್ಬ ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ ತಾಯಿಯ ಎರಡನೇ ವರ್ಷದ ಆರಾಧನೆಯನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ.
ಬೆಂಗಳೂರಿನ ಮಲ್ಲತ್ತಹಳ್ಳಿಯ ನಿವಾಸಿಯಾಗಿರುವ ಹೇಮಂತ್ ಕುಮಾರ್ ಅವರು, ತಮ್ಮ ತಾಯಿ ರಾಧಮ್ಮ ಅವರ ಸ್ಮರಣಾರ್ಥವಾಗಿ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ, ಕೊರೊನಾ ವೈರಸ್ನಿಂದ ದೂರ ಉಳಿಯಲು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿಕೊಟ್ಟಿದ್ದಾರೆ.
ಕೊರೊನಾ ವೈರಸ್ ಇಡೀ ವಿಶ್ವವನ್ನ ಬೆಚ್ಚಿ ಬೀಳಿಸಿದೆ. ಈ ಮಹಾಮಾರಿಯ ಕಾಟಕ್ಕೆ ಜಗತ್ತೇ ನಡುಗಿ ಹೋಗಿದೆ. ಕೊರೊನಾ ತಡೆಗಟ್ಟಲು ಸರ್ಕಾರ ಹರಸಾಹಸಪಡುತ್ತಿದೆ. ಜನಜಂಗುಳಿ ಹೆಚ್ಚಿರುವ ಕಡೆ ಹೋಗಬೇಡಿ, ನಿಮ್ಮ ಎಚ್ಚರಿಕೆಯಲ್ಲಿ ಇರಿ. ಆಗಾಗ ಸ್ಯಾನಿಟೈಸರ್ ಬಳಸಿ ಕೈ ತೊಳಿಯಿರಿ, ಮಾಸ್ಕ್ ಧರಸಿ, ಸ್ವಚ್ಚತೆ ಕಾಪಾಡಿಕೊಳ್ಳಿ. ಆದಷ್ಟು ವ್ಯಕ್ತಿಗಳಿಂದ ದೂರದಿಂದಲೇ ಮಾತಾನಾಡಿಸಿ ಹೀಗೆ ಅನೇಕ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.
ಕೊರೊನಾದಿಂದ ದೂರ ಉಳಿಯಬೇಕಾದರೇ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ಮಾಡಿದಾಗ ಕೈಗಳನ್ನು ಸ್ಯಾನಿಟೈಸರ್ನಿಂದ ತೊಳೆದುಕೊಳ್ಳಬೇಕು, ಜೊತೆಗೆ ಮಾಸ್ಕ್ ಧರಸಿರಬೇಕು. ಆದರೇ ಈ ಎರಡು ವಸ್ತುಗಳ ಬೇಡಿಕೆ ಹೆಚ್ಚಾಗಿ ಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಸಿಗುವ ಕಡೆ ದುಪ್ಪಟ್ಟು ಹಣ ಕೊಟ್ಟು ಕೊಂಡುಕೊಳ್ಳಬೇಕು. ಅದರಲ್ಲೂ ಬಡ ಮಕ್ಕಳಿಗೆ ಮಾಸ್ಕ್ ಅಂಡ್ ಸ್ಯಾನಿಟೈಸರ್ ಸಿಗುವುದು ದೂರದ ಮಾತು.
ಈ ವಿಷಯವನ್ನು ತಿಳಿದ ಹೇಮಂತ್ ಕುಮಾರ್ ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ ತಾಯಿಯ ಎರಡನೇ ವರ್ಷದ ಆರಾಧನೆಯನ್ನು ಅರ್ಥಪೂರ್ಣ ವಾಗಿ ಮಾಡಿದ್ದಾರೆ.