3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

Public TV
2 Min Read
SAUDI

ಲಕ್ನೋ: ತಮ್ಮ 25 ವರ್ಷದ ಮಗ ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದು, ಇನ್ನೂ ಆತನ ಮೃತದೇಹ ತವರಿಗೆ ವಾಪಸ್ಸಾಗಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಿಂದ ತಾಯಿ, ಮಗನ ಮೃತದೇಹಕ್ಕಾಗಿ ಕಾಯುತ್ತಿರುವ ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತನ ಕುಟುಂಬಸ್ಥರು ಅಮೇಥಿ ಜಿಲ್ಲೆಯ ಬಝಾರ್ ಶುಕುಲ್ ಪೊಲೀಸ್ ಠಾಣೆಗೆ ಮಗ ದಿನೇಶ್ ಕುಮಾರ್ ಸಿಂಗ್ ಮೃತದೇಹಕ್ಕಾಗಿ ಪತ್ರಗಳ ಮೇಲೆ ಪತ್ರ ಬರೆದು ಸುಸ್ತಾಗಿದ್ದಾರೆ. ತಾಯಿ ತನ್ನ ಇಬ್ಬರು ನಿರುದ್ಯೋಗಿಗಳಾಗಿರುವ ಗಂಡು ಮಕ್ಕಳ ಜೊತೆ ಮನೆಗೆ ಆಧಾರ ಸ್ತಂಭವಾಗಿದ್ದ ಮಗನ ಮೃತದೇಹವನ್ನು ಕಾಣಲು ನಿದ್ದೆಗೆಟ್ಟು ಕಾಯುತ್ತಿದ್ದಾರೆ.

CRIME 4

2018ರ ಜನವರಿ ತಿಂಗಳಿನಲ್ಲಿ ಸಿಂಗ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ಅಲ್ಲಿ ದಮ್ಮಾಮ್ ನಗರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದನು. ಸೆಪ್ಟೆಂಬರ್ 23ರಂದು ಸಿಂಗ್ ಗೆಳೆಯನೊಬ್ಬ ಕರೆ ಮಾಡಿ, ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ಮಾಹಿತಿ ನಿಡಿದ್ದಾನೆ. ಅಲ್ಲದೇ ಆತನ ಮೃತದೇಹವನ್ನು ತವರಿಗೆ ಕಳುಹಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿಯೂ ಹೇಳಿದ್ದಾನೆ ಅಂತ ದಿನೇಶ್ ತಾಯಿ ಪ್ರಭಾ ದೇವಿ ಕಣ್ಣೀರು ಹಾಕುತ್ತಾ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ನನ್ನ ದುರಾದೃಷ್ಟವೋ ಏನೋ, ಇದೂವರೆಗೂ ನನ್ನ ಮಗನ ಶವವನ್ನು ಕಣ್ಣಾರೆ ನೋಡಲು ತವರಿಗೆ ವಾಪಸ್ಸಾಗಿಲ್ಲ ಅಂತ ಪ್ರಭಾ ಗದ್ಗದಿತರಾದ್ರು.

CRIME 01

ಆತ ಸೌದಿಯಲ್ಲಿ ತಿಂಗಳಿಗೆ 90 ಸಾವಿರ ಸಂಪಾದನೆ ಮಾಡುತ್ತಿದ್ದನು. ಅದರಲ್ಲಿ 50 ಸಾವಿರ ಮನೆಗೆ ಕಳುಹಿಸುತ್ತಿದ್ದನು. ಈ ಮೂಲಕ ಮನೆಗೆ ಆಧಾರಸ್ತಂಭವಾಗಿದ್ದನು. ನನ್ನ ದೊಡ್ಡ ಮಗ ನಿರುದ್ಯೋಗಿಯಾಗಿದ್ದಾನೆ. ಸಣ್ಣ ಮಗ ಇನ್ನೂ ಚಿಕ್ಕವನಾಗಿದ್ದು, ಓದುತ್ತಿದ್ದಾನೆ. ಪತಿ ಕೂಡ ಕೆಲ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ನಾವು ನಿರ್ಗತಿಕರಾಗಿದ್ದೇವೆ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ದಿನೇಶ್ ಮೃತದೇಹವನ್ನು ತವರಿಗೆ ತರುವಲ್ಲಿ ಪ್ರಯತ್ನಿಸುತ್ತಿದ್ದೆ. ಇದಕ್ಕಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯ ಜೊತೆ ಸೆ. 26ರಂದು ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ನಾವು ಸೆ. 28ರಂದು ಸಂಸದ ವರುಣ್ ಗಾಂಧಿಯವರನ್ನು ಸಂಪರ್ಕಿಸಿದ್ದೇವೆ. ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ ಅಂತ ಮುಕೇಶ್ ಹೇಳಿದ್ದಾರೆ.

CRIME 3

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೂ ಈ ಬಗ್ಗೆ ತಿಳಿಸಿದ್ದೇವೆ. `ರಿಯಾದ್ ನಲ್ಲಿರುವ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಅವರು ಈ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ಬಳಿಕ ಕ್ರಮಕೈಗೊಳ್ಳಲಿದ್ದಾರೆ’ ಅಂತ ಅಕ್ಟೋಬರ್ 16ರಂದು ನಮಗೊಂದು ಪತ್ರ ಕಳುಹಿಸಿದ್ದಾರೆ. ಆದ್ರೆ ಆ ಬಳಿಕವೂ ದಿನೇಶ್ ಮೃತದೇಹ ತವರಿಗೆ ರವಾನೆಯಾಗುತ್ತಿರುವ ಬಗ್ಗೆ ಯಾವುದೇ ಸುಳೀವು ಸಿಕ್ಕಿರಲಿಲ್ಲ. ಹೀಗಾಗಿ ಮತ್ತೆ ನಾನು ನವೆಂಬರ್ 15ರಂದು ಪತ್ರ ಬರೆದೆ. ಮೃತದೇಹ ರವಾನೆಗೆ ಅವರು ಇನ್ನೂ ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಸಚಿವಾಲಯ ನಮಗೆ ಭರವಸೆ ನೀಡುತ್ತಲೇ ಇದೆ. ಆದ್ರೆ ಮೃತದೇಹ ಮಾತ್ರ ಇಂದೂ ಮನೆ ಸೇರಿಲ್ಲ. ನಮಗೆ ನಮ್ಮ ಅಣ್ಣನ ಶವ ಮಾತ್ರ ಬೇಕು. ಅಲ್ಲದೇ ಮೃತ ದೇಹ ಕಳುಹಿಸಲು ಯಾಕೆ ತಡಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೂಡ ನೀಡಬೇಕು ಅಂತ ಮುಕೇಶ್ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article