ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಯೋಧರಿಗೆ ಅವಮಾನ ಎಸಗುವ ಪಠ್ಯವನ್ನು ಬೋಧಿಸಲಾಗುತ್ತಿದೆ.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ‘ಯುದ್ಧ ಒಂದು ಉದ್ಯಮ’ ಎಂಬ ಗದ್ಯವನ್ನು ಪ್ರಥಮ ವರ್ಷದ ಬಿಎಸ್ಸಿ ಮತ್ತು ಬಿಸಿಎ ಸೇರಿದಂತೆ ವಿವಿಧ ತರಗತಿಗಳಿಗೆ ಬೋಧಿಸಲಾಗುತ್ತಿದ್ದು, ಈ ಪಾಠದಲ್ಲಿ ಯೋಧರನ್ನು ಮತ್ತು ಯುದ್ಧವನ್ನು ಕೀಳಾಗಿ ಬಿಂಬಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಮೂಲಕ ಹೊರಬಂದ ಪುಸ್ತಕದಲ್ಲಿ ಯುದ್ಧ ಅಂದ್ರೆ ಒಂದು ಉದ್ಯಮ, ಗಡಿಭಾಗದಲ್ಲಿ ನಿರಂತರ ಅತ್ಯಾಚಾರಗಳು ನಡೆಯುತ್ತದೆ. ಇದರಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಭಾಗಿಯಾಗುತ್ತಾರೆ. ಅಲ್ಲದೆ ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆ ಮೂಡಿಸಿ ಭ್ರಮೆ ಸೃಷ್ಠಿಸಲಾಗುತ್ತಿದೆ ಎಂದು ಪಠ್ಯದಲ್ಲಿ ಬರೆಯಲಾಗಿದೆ.
ಬರಗೂರು ಅವರ ಈ ಗದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಯುವ ಮನಸ್ಸುಗಳಿಗೆ ಯುದ್ಧ ಮತ್ತು ದೇಶದ ಬಗ್ಗೆ ಕೀಳಾಗಿ ಬಿಂಬಿಸುವ ಪಾಠವನ್ನು ಬೋಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಒಟ್ಟು 12 ಗದ್ಯಗಳಿದ್ದು ಬರಗೂರು ರಾಮಚಂದ್ರಪ್ಪ ಅವರದ್ದು 10ನೇ ಗದ್ಯವಾಗಿದೆ.