ಮಂಗಳೂರು: ರಾಮಮಂದಿರ ನಿರ್ಮಾಣ ಆದಾಗಲೇ ದೇಶದಲ್ಲಿ ಅಚ್ಛೇ ದಿನ್ ಬರಲಿದೆ ಎಂದು ಬಜರಂಗದಳ ರಾಷ್ಟ್ರೀಯ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶ ಟಿಪ್ಪು, ಅಕ್ಬರ್, ಬಾಬರ್ ಗೆ ಸೇರಿದ್ದಲ್ಲ. ಮತಾಂಧ, ದೇವಸ್ಥಾನ ಲೂಟಿಗೈದ ಟಿಪ್ಪು ಜಯಂತಿ ಮಾಡುತ್ತಿರುವಿರಿ, ಕರ್ನಾಟಕದ ಜನತೆಗೆ ಸ್ವಾಭಿಮಾನ ಇದೆಯೇ? ಜಯಂತಿ ಬೇಕಿದ್ದರೆ ಹರಿಹರ ಬುಕ್ಕ, ಕೃಷ್ಣದೇವರಾಯನ ಜಯಂತಿ ಮಾಡಿ ಎಂದು ಗುಡುಗಿದರು.
ಈ ದೇಶದಲ್ಲಿ ಬಾಬರ್ ವಂಶಸ್ಥರು ಇದ್ದಾರೆಯೇ? ದೇಶದಲ್ಲಿ ಶ್ರೀರಾಮನನ್ನು ಆರಾಧಿಸುವ ಕೋಟ್ಯಂತರ ಜನರಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗೆ ಸಮಯ ಇಲ್ಲವಂತೆ. ಆದರೆ ಶಬರಿಮಲೆ, ಕರುಣಾನಿಧಿ ಅಂತ್ಯಕ್ರಿಯೆ ಸ್ಥಳದ ವಿವಾದ ಇತ್ಯರ್ಥಕ್ಕೆ, ದೀಪಾವಳಿ ಪಟಾಕಿ ನಿಷೇಧಕ್ಕೆ ಸಮಯ ಇದೆ ಎಂದು ಆರೋಪಿಸಿದರು.
ಲೋಕಸಭೆಯ ಚಳಿಗಾಲ ಅಧಿವೇಶನದಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ನಿರ್ಣಯ ಕೈಗೊಳ್ಳಬೇಕು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾದರೆ ಮಾತ್ರ ಅಚ್ಛೇ ದಿನ್ ಬರುತ್ತದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv