ಭುವನೇಶ್ವರ: ಒಡಿಶಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಯುವತಿಯೊಬ್ಬಳು ಪ್ರಿಯಕರನಿಂದ ಬ್ಲ್ಯಾಕ್ಮೇಲ್ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಫ್ಟ್ವೇರ್ ಎಂಜಿನಿಯರ್ ಶ್ವೇತಾ ಉತ್ಕಲ್ ಕುಮಾರಿ ಎಂಬಾಕೆಯೇ ತನ್ನನ್ನು ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಇದು ಗೊತ್ತಾಗಿದ್ದು, ಯುವತಿ ಕುಟುಂಬಸ್ಥರು ಪ್ರಿಯಕರ ಸೌಮ್ಯಜಿತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳೂ ಇರಲಿಲ್ಲ ಎಂದು ವರದಿ ಹೇಳಿದೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!
ಏನಿದು ಟೆಕ್ಕಿ ಸುಂದರಿಯ ಕಹಾನಿ?
ಭುವನೇಶ್ವರದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ, ಸೌಮ್ಯಜಿತ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆಗಾಗ್ಗೆ ಇಬ್ಬರೂ ಹೊರಗೆ ಸುತ್ತಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಸೌಮ್ಯಜಿತ್, ಶ್ವೇತಾಳ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದನು. ಇಬ್ಬರ ನಡುವೆ ಮದುವೆ ಮಾತುಕತೆ ನಡೆದಾಗ ಪಬ್ವೊಂದರಲ್ಲಿ ಜಗಳ ಮಾಡಿಕೊಂಡಿದ್ದರು. ವರದಕ್ಷಿಣೆಗಾಗಿ ಸೌಮ್ಯಜಿತ್ 30 ಲಕ್ಷ ರೂ. ಬೇಡಿಕೆಯಿಟ್ಟದ್ದನು. ಇದನ್ನು ನಿರಾಕರಿಸಿದ ನಂತರ ಶ್ವೇತಾಳ ಖಾಸಗಿ ಫೋಟೋಗಳನ್ನು ತೋರಿಸಿ ಸೌಮ್ಯಜಿತ್ ಆಕೆಯನ್ನು ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದಾನೆ. ಹಣ ಕೊಡದೇ ಇದ್ದರೇ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಯಬಿಡುವುದಾಗಿಯೂ ಬೆದರಿಕೆ ಹಾಕಿದ್ದನು. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ
ಇದರಿಂದ ಮನನೊಂದ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೌಮ್ಯಜಿತ್ಗೆ 15 ಬಾರಿ ಕರೆ ಮಾಡಿದ್ದರು. ಆದರೆ ಸೌಮ್ಯಜಿತ್ ಫೋನ್ ರಿಸೀವ್ ಮಾಡಿಲ್ಲ ಎಂಬುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಚಂದ್ರಶೇಖರಪುರದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಶ್ವೇತಾಳ ಫೋನ್ ಕರೆಗಳು ಹಾಗೂ ಡೈರಿ ಪರಿಶೀಲಿಸಿದಾಗ ಗೆಳೆಯನ ಬಗ್ಗೆ ಮಾಹಿತಿ ಸಿಕ್ಕಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ಸೊನಾಲಿ ಕೊಲೆಯಾಗಿದ್ದಾಳೆ: ಸಹೋದರ ರಿಂಕು ಆರೋಪ
ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ ಅಥವಾ ದುಷ್ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸೆರೆಹಿಡಿಯಲು ಬಲೆ ಬೀಸಿದ್ದಾರೆ.