ಉಡುಪಿ: ಶಿರೂರು ಮಠದ ಒಂದು ತಿಂಗಳ ಆಡಳಿತ ನಿರ್ವಹಣೆಗೆ ಐವರು ಸದಸ್ಯರ ಆಡಳಿತ ಸಮಿತಿ ಸೋಮವಾರ ರಚನೆಯಾಗಲಿದೆ ಎಂಬ ಮಾಹಿತಿ ಸೋದೆ ಮಠದ ಮೂಲಗಳಿಂದ ಲಭಿಸಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಮಠದ ಮೂಲಗಳಿಂದ ಮಾಹಿತಿ ಲಭಿಸಿದ್ದು, ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಈ ವ್ಯವಸ್ಥೆ ಮಾಡುತ್ತೇವೆ. ಸೋದೆ ವಿಶ್ವವಲ್ಲಭ ಸ್ವಾಮಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗುತ್ತದೆ. ಸೋದೆಮಠವೂ ಶಿರೂರು ಮಠದ ದ್ವಂದ್ವ ಮಠ ಆಗಿರುವುದರಿಂದ ಜವಾಬ್ದಾರಿ ವಹಿಸುತ್ತೇವೆ ಎಂದಿದ್ದಾರೆ. ಆದರೆ ಶಿರೂರು ಮಠದ ಮುಂದಿನ ಉತ್ತರಾಧಿಕಾರಿಯಾಗಲು ವಟುಗಳು ನಿರಾಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳೊಳಗೆ ಶಿರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯಾಗಬೇಕು. ಉತ್ತರಾಧಿಕಾರಿ ಆಯ್ಕೆಗೆ ಸೋದೆ ಮಠದ ಪ್ರಯತ್ನ ನಡೆಸುತ್ತಿದ್ದು, ಹಲವಾರು ವಟುಗಳ ಜಾತಕ ಪರಿಶೀಲನೆ ನಡೆಸುತ್ತಿದ್ದಾರೆ. ವಟು ಆಯ್ಕೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ ನೇಮಕವಾಗಲಿದೆ. ಆದರೆ ನೂತನ ಉತ್ತರಾಧಿಕಾರಿಯಾಗಿ ಬರಲು ಹಲವರ ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಶಿರೂರು ಮಠದ ಆರ್ಥಿಕ ನಷ್ಟವೇ ಈ ನಿರಾಸಕ್ತಿಗೆ ಕಾರಣವಾಗಿದ್ದು, ಸನ್ಯಾಸ ಯೋಗವಿದ್ದರೂ ಉತ್ತರಾಧಿಕಾರಿಯಾಗಲು ಹಲವರ ನಿರಾಸಕ್ತಿ ವಹಿಸಿದ್ದಾರೆ. ಈ ಕುರಿತು ಕಳೆದ ಕೆಲ ವಾರಗಳಿಂದ ಮೂಡಿರುವ ಗೊಂದಲಗಳೇ ಕಾರಣ ಎನ್ನಲಾಗಿದೆ.
ಮಠಾಧೀಶರುಗಳ ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಉತ್ತರಾಧಿಕಾರಿ ಆಯ್ಕೆ ಸಮಿತಿಯಲ್ಲಿ ಶಿರೂರು ಮಠದ ವಿದ್ವಾಂಸರಿಗೂ ಅವಕಾಶ ನೀಡಲಾಗಿದೆ ಎನ್ನಲಾಗಿದೆ.