ಚಿಕ್ಕೋಡಿ(ಬೆಳಗಾವಿ): ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರು ಹಾಗೂ ಬಿಹಾರಿ ಕಾರ್ಮಿಕರಿಗೆ ಚಿಕ್ಕೋಡಿ ಪಟ್ಟಣದ ಸಮಾಜ ಸುಧಾರಕರೊಬ್ಬರು ಸಹಾಯ ಹಸ್ತ ಚಾಚಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಪ್ರಕಾಶ ವಂಟಮತ್ತೆ ಎಂಬವರು 600 ಬಡ ಕುಟುಂಬಗಳು ಹಾಗೂ ಬಿಹಾರಿ ಕಾರ್ಮಿಕರಿಗೆ 15 ದಿನಗಳವರೆಗೆ ದಿನಸಿ ಸಾಮಗ್ರಿ ವಿತರಿಸಿ ಮಾದರಿಯಾಗಿದ್ದಾರೆ. ತರಕಾರಿ, ಬ್ರೆಡ್, ಮಸಾಲೆ ಪದಾರ್ಥಗಳು, ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಚಹಾ ಪುಡಿ ಸೇರಿದಂತೆ ದಿನನಿತ್ಯ ಆಹಾರಕ್ಕೆ ಬಳಸುವ ಸಾಮಗ್ರಿಗಳನ್ನ ನೀಡಿದ್ದಾರೆ.
ಸರ್ಕಾರ ಅಕ್ಕಿ ನೀಡಿದೆ. ಚಿಕ್ಕೋಡಿ ಶಾಸಕರು ಜೋಳ ಹಾಗೂ ಬೇಳೆ ಕಾಳು ಕೊಟ್ಟಿರುವ ಕಾರಣ ಈ ಸಮಾಜ ಸೇವಕ ಆಹಾರ ತಯಾರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನ ನೀಡಿ ಮಾದರಿಯಾಗಿದ್ದಾರೆ. ವಿಶೇಷವಾಗಿ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿರುವ ಒಳ ಚರಂಡಿ ಕಾಮಗಾರಿಗೆ ಆಗಮಿಸಿ ಸಂಕಷ್ಟದಲ್ಲಿರುವ ಬಿಹಾರಿ ಕಾರ್ಮಿಕರ ಶೆಡ್ಗಳಿಗೆ ತೆರಳಿ ಆಹಾರ ಸಾಮಗ್ರಿ ವಿತರಿಸಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಬಡ ಕುಟುಂಬಗಳಲ್ಲಿ ಯಾರಿಗಾದರೂ ದಿನಸಿ ಸಾಮಗ್ರಿಯ ಸಮಸ್ಯೆ ಇದ್ದರೆ ನಮಗೆ ದೂರವಾಣಿ ಕರೆ ಮಾಡಿದ್ರೆ ನಾವು ಅವರಿಗೆ ಆಹಾರ ಸಾಮಗ್ರಿ ತಲುಪಿಸುತ್ತೇವೆ ಎಂದು ಪ್ರಕಾಶ ವಂಟಮೂತ್ತೆ ತಿಳಿಸಿದ್ದಾರೆ. ಮತ ಪಡೆದು ಅದೆಷ್ಟೋ ಜನ ಪ್ರತಿನಿಧಿಗಳು ಜನರ ಸಂಕಷ್ಟ ಕೇಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಸಮಾಜ ಸುಧಾಕರೊಬ್ಬರು ಕಾರ್ಮಿಕರು ಹಾಗೂ ಆಟೋ ಚಾಲಕರ ನೆರವಿಗೆ ನಿಂತು ಇತರರಿಗೂ ಮಾದರಿಯಾಗಿದ್ದಾರೆ.