ಮುಂಬೈ: ವೃದ್ಧರೊಬ್ಬರ ಅಂಗಿಯೊಳಗೆ ಸೇರಿದ್ದ ವಿಷಪೂರಿತ ಹಾವನ್ನು ಆತನಿಗೆ ಗೊತ್ತಾಗದಂತೆ ಹೊರ ತೆಗೆದು, ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ಅಹ್ಮದ್ನಗರದ ಸರ್ಕಾರಿ ಆಸ್ಪತ್ರೆಗೆ ಅನಾರೋಗ್ಯ ಪೀಡಿತ ವೃದ್ಧರೊಬ್ಬರು ಬಂದಿದ್ದರು. ಆದರೆ ಚಿಕಿತ್ಸೆ ವಿಳಂಬವಾಗಿದ್ದರಿಂದ ಆಸ್ಪತ್ರೆಯ ಒಂದು ಕಂಬದ ಬಳಿ ಮಲಗಿದ್ದರು. ಈ ವೇಳೆ ವಿಷಪೂರಿತ ಹಾವೊಂದು ಮೆಲ್ಲಗೆ ನುಸುಳಿ ಅಜ್ಜನ ಅಂಗಿಯೊಳಗೆ ತೂರಿಕೊಂಡುಬಿಟ್ಟಿತ್ತು. ಅಜ್ಜನ ಬೆನ್ನಲ್ಲಿ ತಣ್ಣಗೆ ಮಲಗಿತ್ತು.
ಅಜ್ಜನ ಅಂಗಿಯೊಳಗೆ ಹಾವು ಇರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಕೂಡಲೇ ಉರಗ ತಜ್ಞರೊಬ್ಬರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಆಗಮಿಸಿದ ಉರಗ ತಜ್ಞ, ನಿಧಾನವಾಗಿ ಅಜ್ಜನ ಅಂಗಿಯಲ್ಲಿ ಕೈ ಹಾಕಿ ಹಾವನ್ನು ಹೊರತೆಗೆದಿದ್ದಾರೆ. ಈ ಮೂಲಕ ಅಜ್ಜನ ಪ್ರಾಣ ರಕ್ಷಿಸಿದ್ದಾನೆ.
ಈ ಕುರಿತು ಮಾತನಾಡಿರುವ ಉರಗ ತಜ್ಞ, ಇದಕ್ಕೆ ಹಿಂದಿಯಲ್ಲಿ ಹರೆ ಸಾಂಪ್ (ಹಸಿರು ಹಾವು) ಎಂದು ಕರೆಯುತ್ತಾರೆ. ಇದು ವಿಷಪೂರಿತ ಹಾವಾಗಿದ್ದು ಯಾರಾದರೂ ತೊಂದರೆ ಕೊಟ್ಟರೆ ಮಾತ್ರ ಕಚ್ಚುತ್ತದೆ. ಹೀಗಾಗಿ ವೃದ್ಧನ ಅಂಗಿ ಪ್ರವೇಶ ಮಾಡಿದರೂ ಕಚ್ಚಿಲ್ಲ. ಒಂದು ವೇಳೆ ಅವರು ಯಾವುದಾರೂ ಕಡೆಗೆ ಹೊರಳಿ, ಅದಕ್ಕೆ ನೋವು ಉಂಟು ಮಾಡಿದ್ದರೆ ಕಚ್ಚುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.
https://youtu.be/RO0NVNGdmSI