-ಇಬ್ಬರದ್ದೂ ಬರೋಬ್ಬರಿ ಒಂದು ವಾರಗಳ ಹೋರಾಟ
ಬೆಂಗಳೂರು: ಸಾವಿನ ಬಲೆಯಲ್ಲಿ ಸಿಲುಕಿದ್ದ ನಾಗಪ್ಪ ಪ್ರಾಣ ಉಳಿಸಿಕೊಳ್ಳಲು ಒದ್ದಾಡಿದ್ದು ಬರೋಬ್ಬರಿ ಒಂದುವಾರ. ಇನ್ನೇನು ಸಾವಿನ ಸೆಣಸಾಟದ ಅಂತಿಮ ಘಟ್ಟ ತಲುಪಿತ್ತು. ಒಂದು ಕಣ್ಣು ಕಳೆದುಕೊಂಡಿತ್ತು. ಇನ್ನೊಂದಡೆ ತೆರೆದ ದೊಡ್ಡ ಸಂಪ್ನಲ್ಲಿ ಬಿದ್ದು ಹೊರಬರಲಾರದೇ ನಾಗರಹಾವಿನ ಒದ್ದಾಟ ಎಂತವರ ಕಣ್ಣಲ್ಲೂ ನೀರು ತರಿಸುತ್ತಿತ್ತು. ಈ ಎರಡು ಹಾವನ್ನು ಸಾವಿನಿಂದ ತಪ್ಪಿಸಲು ‘ಅಪರೇಷನ್ ನಾಗಪ್ಪ’ ನಡೆದ ರೋಚಕ ಸ್ಟೋರಿ ಇಲ್ಲಿದೆ.
ಹೆಬ್ಬಾಳದಲ್ಲಿ ಬಲೆಯೊಳಗೆ ಸಿಲುಕಿದ ಹಾವು ಸಾವಿನಿಂದ ತಪ್ಪಿಸಿಕೊಳ್ಳಲು ಸೆಣಸಾಡಿದ್ದು ಬರೋಬ್ಬರಿ ಒಂದು ವಾರ. ಜೀವ ಉಳಿಸಲು ಒದ್ದಾಡುತ್ತ ಒಂದು ಕಣ್ಣನ್ನು ಕಳೆದುಕೊಂಡಿತ್ತು. ಇನ್ನೇನು ಜೀವದಲ್ಲಿ ಚೈತನ್ಯವೇ ಇಲ್ಲ ಸಾವೇ ಅಂತಿಮ ಅಂತಾ ಸಾವಿನ ವಿರುದ್ಧದ ಹೋರಾಟವನ್ನು ನಿಲ್ಲಿಸಿ, ಬಲೆಯೊಳಗೆ ಜೀವಂತ ಶವವಾಗಿ ಮಲಗಿತ್ತು. ಅಷ್ಟರಲ್ಲಿ ಈ ಹಾವಿನ ಒದ್ದಾಟ ಯಾರೋ ಪುಣ್ಯಾತ್ಮರ ಕಣ್ಣಿಗೆ ಬಿದ್ದಿದೆ.
ಬಾಣಸವಾಡಿಯಲ್ಲಿ ತೆರೆದ ದೊಡ್ಡ ಸಂಪ್ನಲ್ಲಿ ಬಿದ್ದ ಹಾವು ಹೊರಗೆ ಬರಲಾಗದೇ ಒದ್ದಾಡ್ತಿತ್ತು. ಬಿದ್ದ ರಭಸಕ್ಕೆ ಅತ್ತಿತ್ತ ಚಲಿಸಲು ಸಾಧ್ಯವಾಗದೇ ಪ್ರಾಣ ಉಳಿಸಿಕೊಳ್ಳಲು ಆಗದೇ ನಿಸ್ಸಾಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿತ್ತು. ಈ ಹಾವು ಸಹ ಬರೋಬ್ಬರಿ ಒಂದು ವಾರ ಕಾಲ ಬದುಕಿಗಾಗಿ ಹೋರಾಟ ಮಾಡಿದೆ.
ಈ ಎರಡು ಹಾವುಗಳನ್ನು ಸಾವಿನ ದವಡೆಯಿಂದ ರಕ್ಷಿಸಿದ್ದು ಉರಗ ತಜ್ಞ ರಾಜೇಶ್. ಅದರಲ್ಲೂ ಬಲೆಯೊಳಗೆ ಬಿದ್ದ ನಾಗಪ್ಪನ ರಕ್ಷಿಸಿದ್ದೇ ಒಂದು ರೋಚಕ ಕಥೆ. ಯಾಕೆಂದ್ರೆ ಸ್ವಲ್ಪ ಯಾಮಾರಿದ್ರೂ ಹಾವು ಕಚ್ಚುವ, ಬಲೆಯನ್ನು ಬಿಡಿಸುವಾಗ ಹಾವಿಗೆ ಏಟಾಗುವ ಸಾಧ್ಯತೆ ಇತ್ತು. ಕೊನೆಗೆ ಹಾವಿನ ಮುಖವನ್ನು ಬಲೆಯಿಂದ ಬಿಡಿಸಿ, ಅದನ್ನು ಕೊಳವೆಯಿಂದ ಮುಚ್ಚಿ ನಿಧಾನವಾಗಿ ಮೈಮೇಲೆ ಅಂಟಿದ್ದ ಬಲೆಯನ್ನು ಬ್ಲೇಡ್ನಿಂದ ಕಟ್ ಮಾಡಿದರು. ಬಲೆ ಬಿಡಿಸಿದ ತಕ್ಷಣ ನಾಗಪ್ಪ ಎದ್ನೋ ಬಿದ್ನೋ ಅಂತಾ ಓಡಿಹೋಯ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv